ಗುರುವಾರ, ಸೆಪ್ಟೆಂಬರ್ 14, 2023

ಧರ್ಮಸ್ಥಳ ಸೌಜನ್ಯ ಪ್ರಕರಣ ಅಂದಿನಿಂದ ಇಂದಿನವರೆಗೆ….!! ಮುಂದೆ??

ಸೌಜನ್ಯ ದೌರ್ಜನ್ಯ ನತ ದ್ರಷ್ಟ ಸೌಜನ್ಯ ಎಂಬ ವಿದ್ಯಾರ್ಥಿನಿಯು ಘೋರ,ಭಯಾನಕವಾಗಿ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರಗೊಂಡು ಹತ್ಯೆಯಾಗಿ ಸರಿ ಸುಮಾರು ಹನ್ನೊಂದು ವರ್ಷಗಳೇ ಕಳೆದು ಹೋಗಿದೆ.ಇಂದಿಗೂ ನೈಜ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ನಮ್ಮಲ್ಲಿನ ಕಾನೂನು ವ್ಯವಸ್ಥೆ,ತನಿಖಾ ಸಂಸ್ಥೆಯಿಂದ ಆಗದೇ ಹೋಯಿತು, ಸುದೀರ್ಘ ಹನ್ನೊಂದು ವರ್ಷಗಳ ಬಳಿಕ ಬಂದ ಕೋರ್ಟ್ ತೀರ್ಪು ಅಸಮಾಧಾನದಿಂದ ಕೂಡಿತ್ತು ಹಾಗೂ ಮತ್ತೆ ಸೌಜನ್ಯ ಸುದ್ದಿ ಗರಿಗೆದರುವಂತೆ ಮಾಡಿಬಿಟ್ಟಿತು.ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮ್ಮರೊಡಿ, ಸಂತ್ರಸ್ತೆಯ ಕುಂಟುಂಬಸ್ಥರನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ, ಒಂದಷ್ಟು ಒಳ್ಳೆ/ಕೆಟ್ಟಮನಸ್ಸುಗಳೂ ಇದಕ್ಕೆ ಕೈ ಜೋಡಿಸಿವೆ . ಈ ಪ್ರಕರಣವನ್ನು ಆರಂಭದಲ್ಲಿ ಅಕ್ಟೋಬರ್ 2012ರಲ್ಲಿ ದಾಖಲಿಸಲಾಯಿತು,ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದರು ನಂತರ ಅದನ್ನು ನವೆಂಬರ್ 2013 ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ), ಚೆನ್ನೈನ ವಿಶೇಷ ಅಪರಾಧ ವಿಭಾಗವು ವಹಿಸಿಕೊಂಡಿತು. 2016ರಲ್ಲಿ ತನಿಖೆ ಪೂರ್ಣಗೊಳಿಸಿ ಸಿಬಿಐ ವರದಿ ಸಲ್ಲಿಸಿತ್ತು. ಜೂನ್ 16 ರ ಆದೇಶದಲ್ಲಿ, ನ್ಯಾಯಾಧೀಶ ಸಿಬಿ ಸಂತೋಷ್, ಆರೋಪಿ ಮತ್ತು ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಸಾಕ್ಷಿಗಳಿಲ್ಲದಿರುವುದ ಬಗ್ಗೆ ತೀರ್ಪು ನೀಡಿದ್ದರು. ಅದೇ ಈಗ ಪುನಃ ಸೌಜನ್ಯಾ ಪ್ರಕರಣ ಜೀವ ಪಡೆಯುವುದಕ್ಕೆ ಕಾರಣೀಭೂತವಾಗಿದೆ.ಅಪರಾಧಿ ಎಂದು ಬಂಧಿಸಲ್ಪಟ್ಟು 6 ವರ್ಷ ಜೈಲು ಪಾಲಾಗಿ,ಜಾಮೀನಿನ ಮೂಲಕ ಹೊರಗೆ ಬಂದ ಸಂತೋಷ್ ರಾವ್, ನಿರಪರಾಧಿ ಎಂಬ ತೀರ್ಪು ಮೇಲ್ನೋಟಕ್ಕೆ ಕೋರ್ಟ್ ತೀರ್ಪಿನ ಪ್ರತಿಯಲ್ಲಿ ಗೊತ್ತಾಗಿದ್ದೇ ತಡ, ಹೋರಾಟಗಾರರಿಗೆ ಹಾಗೂ ಸಂತ್ರಸ್ತೆಯ ಕುಟುಂಬಿಕರಿಗೆ ಸಂತಸ ತಂದರೂ, ನಿಜವಾದ ಅಪಾಧಿಗಳು ಯಾರು ಅವರನ್ನು ಬಂಧಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿತ್ತು. ಹೌದು! ಹಾಗಾದರೆ ಅಪರಾಧಿಯಾರು? ಹತ್ಯಾಚಾರವಾದದ್ದು ಸತ್ಯ ಅಪರಾಧಿ ಇರುವುದು ಕೂಡ ಅಷ್ಟೇ ಸತ್ಯ! ಏನಿದು ಘಟನೆ? ಅದು 2012, 9ರ ಜೂನ್ ನಲ್ಲಿ ನಡೆದ ಘನ ಘೋರ ಘಟನೆ.ಎಂದಿನಂತೆ ಸಂಜೆ 4:30 ಸಮಯಕ್ಕೆ ಉಜಿರೆಯ ಎಸ್ಡಿಎಂ ಕಾಲೇಜಿನಿಂದ ಧರ್ಮಸ್ಥಳ ಗ್ರಾಮದ ಪಾಂಗಾಳಕ್ಕೆ ತನ್ನ ಮನೆಗೆ ಹೆಜ್ಜೆ ಹಾಕುತ್ತಿದ್ದ ಪಿಯುಸಿ ಓದುತ್ತಿದ್ದ 17 ವರ್ಷದ ಸೌಜನ್ಯ ಎನ್ನುವ ವಿದ್ಯಾರ್ಥಿನಿ ಮನೆಗೆ ಸೇರಿರಲಿಲ್ಲ.ಬಸ್ ನ್ನು ಇಳಿದು ಮನೆ ಕಡೆ ಹೋಗುತ್ತಿದ್ದ ಈಕೆಯನ್ನು ಕಂಡವರು ಇದ್ದಾರೆ ಸ್ವತಃ ಆಕೆಯ ಮಾವ ವಿಠ್ಠಲ ಗೌಡ ನೋಡಿದ್ದೂ,ವಿಶ್ ಕೂಡಾ ಮಾಡಿದ್ದರು ಅಂತೆ, ಆದರೆ ಮನೆಗೆ ಮಾತ್ರ ಆಕೆ ಹೋಗಲಿಲ್ಲ! ಅಲ್ಲಿ, ಇಲ್ಲಿ, ಎಲ್ಲಾ ಕಡೆ ಹುಡುಕಿದರೂ, ಸೌಜನ್ಯಾ ಇರುವಿಕೆ ಅರಿಯದೇ ಸ್ವಾಭಾವಿಕವಾಗಿ ಟೆನ್ಷನ್ ಗೆ ಒಳಗಾಗಿದ್ದರು ಕುಟುಂಬದ ಸದಸ್ಯರು.ಹುಡುಗಾಟ ಪ್ರಾರಂಭವಾಯಿತು ಇಡೀ ರಾತ್ರಿ ಶೋಧ ನಡೆಸಿದರೂ, ಸೌಜನ್ಯಳ ಸುಳಿವು ಸಿಕ್ಕಿರಲಿಲ್ಲ.ಮರುದಿನ ಅದೇ ಪ್ರದೇಶಕ್ಕೆ ಹೊಂದಿಕೊಂಡಂತೆ ಮುಖ್ಯ ರಸ್ತೆಯ ಕೂಗಳತೆಯ ದೂರದಲ್ಲಿ ಸೌಜನ್ಯಳ ಶವ ಪತ್ತೆಯಾಗುತ್ತದೆ. ದೇಶದ ನಾಗರಿಕ ಸಮಾಜ ತಲೆ ತಗ್ಗಿಸುವಂತ ರೀತಿಯಲ್ಲಿ ಕಂಡು ಬರುತ್ತದೆ ಆ ನೋಟ.ಅತ್ಯಾಚಾರ ಎಸಗಿದ್ದೂ ಮಾತ್ರ ಅಲ್ಲದೆ ತನ್ನ ಕ್ರೌರತೆ, ಮ್ರಗರತೆಯನ್ನು ಮರೆದ್ದರು ದುಷ್ಟರು. ಶವ ಸಿಕ್ಕ ಸ್ಥಿತಿಯನ್ನು ಬಿಡಿಸಿ, ಬಿಡಿಸಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಇಡೀ ರಾಜ್ಯಕ್ಕೆ ಅದಾಗಲೇ ಗೊತ್ತಿರುವ ವಿಷಯ.ದೌರ್ಜನ್ಯ ವಿರೋಧಿಸಿ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಯುತ್ತದೆ., ಹರತಾಳ ಮುಗಿಲು ಮುಟ್ಟುತ್ತದೆ ಈತನ್ಮಧ್ಯೇ ಬೆಳ್ತಂಗಡಿಯ ಹಿಂದೂ ಹುಲಿ ಎಂದು ಗುರುತಿಸಲ್ಪಟ್ಟ ಮಹೇಶ್ ಶೆಟ್ಟಿ ತಿಮ್ಮರೊಡಿ ಅಚಾನಕ್ಕಾಗಿ ಈ ಪ್ರಕರಣದಲ್ಲಿ ಕಾಣಿಸಿಕೊಂಡು, ಸೌಜನ್ಯ ಕುಟುಂಬಸ್ಥರ ಜೊತೆ ಪ್ರತಿಭಟನೆಗೆ ಇಳಿದು ಬಿಡುತ್ತಾರೆ.
ಕೃತ್ಯ ನಡೆದ ಸ್ಥಳದಿಂದ ಸುಮಾರು ಒಂದೂವರೆ ಕಿಮೀ ದೂರದಲ್ಲಿರುವ ಬಾಹುಬಲಿ ಬೆಟ್ಟದಲ್ಲಿ ಸಂಜೆಯ ಸಮಯದಲ್ಲಿ ಭಿಕ್ಷುಕನ ರೀತಿಯಲ್ಲಿ ನಿಂತಿದ್ದ ಸಂತೋಷ್ ರಾವ್ ಎಂಬಾತನ್ನು ಈ ಪ್ರಕರಣದಲ್ಲಿ ಹೋರಾಟಗಾರರು ಆರೋಪಿಸಿರುವ ನಾಲ್ಕು ಮಂದಿಯ ಪೈಕಿ ಮಲ್ಲಿಕ್ ಜೈನ್ ಜೊತೆಗೆ,ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ.ಈತನೇ ಸೌಜನ್ಯ ರೇಪ್ ಅಂಡ್ ಮರ್ಡರ್ ಮಾಡಿದ್ದು ಎಂದೂ ಆತನನ್ನು ಜೈಲ್ ನ ಕಂಬಿ ಹಿಂದೆ ತಳ್ಳುತ್ತಾರೆ., ಹೋರಾಟಗಾರರು ಹಾಗೂ ಸೌಜನ್ಯ ಮನೆಯವರು ಈತ ನಿರಾಪರಾಧಿ ಇದರ ಹಿಂದೆ ಬೇರೆ 4 ಜನರು ಇದ್ದಾರೆ ಎಂದು ಅವರ ಹೆಸರನ್ನುಬಹಿರಂಗ ಪಡಿಸುತ್ತಾರೆ . ಆ ಆರೋಪಿಗಳು ಪಾರಾಗಲು ಸಂತೋಷ್ ರಾವ್ ಎನ್ನುವ ಮುಗ್ದ, ಮಾನಸಿಕ ರೋಗಿ ತರಹ ಇರುವ ಈ ವ್ಯಕ್ತಿಯನ್ನು ಪಿಟ್ ಮಾಡಲಾಗಿದೆ ಎಂದೂ ಆರೋಪಿಸುತ್ತಾರೆ. ಸೌಜನ್ಯಳ ಪೋಸ್ಟ್ ಮಾರ್ಟಮ್ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಪೊಲೀಸ್ ತನಿಖೆ ಇನ್ನಿತರ ಚಟುವಟಿಕೆಗಳು ಸರಿಯಾದ ರೀತಿಯಲ್ಲಿ ಆಗಿಲ್ಲ, ಹಾಗೂ ಆರೋಪಿಗಳ ಮೇಲೆ ನಾವು ಕೊಟ್ಟ ದೂರನ್ನು ಪೊಲೀಸರು ಪ್ರಭಾವಿಗಳ ಒತ್ತಡದ ಮೇಲೆ ದಾಖಲಿಸಲಿಲ್ಲ ಎಂಬ ಆರೋಪವನ್ನು ಇಂದಿಗೂ ಮಾಡುತ್ತಾರೆ. ಆರೋಪಿಗಳು ಎಂದು ಹೇಳಲ್ಪಟ್ಟ 4 ಜನರಲ್ಲಿ ಒಬ್ಬ ಧರ್ಮಸ್ಥಳದ ಧರ್ಮಾಧಿಕಾರಿಯ ತಮ್ಮನ ಮಗ ನಿಶ್ಚಲ್ ಜೈನ್, ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಆ ಸಮಯದಲ್ಲಿ ಆತ ಊರಿನಲ್ಲಿ ಇರಲೇ ಇಲ್ಲ ಎಂಬ ಸಾಕ್ಷಿ ಸಿಕ್ಕರೂ, ಅದೆಲ್ಲಾ ಫೇಕ್ ಎನ್ನುವುದು ಸೌಜನ್ಯ ಮನೆಯವರ ಉದಾಂಡ ವಾದ .ಇನ್ನುಳಿದ ಮೂವರ ವಿಚಾರಣೆಯಾಗುತ್ತದೆ ಹಾಗೂ ಸ್ವಯಂ ಪ್ರೇರಿತವಾಗಿ ಬ್ರೈನ್ ಮ್ಯಾಪಿಂಗ್ ಗೂ ಒಳಪಡಿಸಲಾಗಿದೆ ಎಂಬ ದಾಖಲೆಯನ್ನೂ ಪ್ರೆಸ್ ಮೀಟ್ ನಡೆಸಿ ಈ ಮೂವರು ಮುಂದಿಡುತ್ತಾರೆ. ಸಿಓಡಿ ಇಂದ ಸಿಬಿಐವರೆಗಿನ ಮೆಟ್ಟಿಲನ್ನೂ, ಹತ್ತಿದ್ದ ಈ ಪ್ರಕರಣ ಕೊನೆಗೂ ಇತ್ತೀಚಿಗೆ ಸಿಬಿಐ ನಿಂದ ತೀರ್ಪು ಬಂದಿತ್ತು ಅಪರಾಧಿ ಎಂದು ಬಿಂಬಿಸಲಾಗಿದ್ದ ಸಂತೋಷ್ ರಾವ್ ಬಗೆಗೆ ಯಾವುದೇ ಸಾಕ್ಷಿ ಆಧಾರಗಳಿಲ್ಲ ಆತ ನಿರಾಪರಾಧಿ ಎಂಬ ದಿಕ್ಕಿನಲ್ಲಿ ಆತನಿಗೆ ಕ್ಲೀನ್ ಚಿಟ್ ಮಾದರಿಯಲ್ಲಿ ತೀರ್ಪು ನೀಡಿತ್ತು.ಇದರಿಂದ ಅತೃಪ್ತಗೊಂಡ ಸೌಜನ್ಯ ಮನೆಯವರು ಹಾಗೂ ಹೋರಾಟಗಾರರು ಪ್ರತಿಭಟನೆಗೆ ಇಳಿದು ಬಿಟ್ಟಿದ್ದಾರೆ.ಸಂತೋಷ್ ರಾವ್ ಅಪರಾಧ ಮಾಡಿಲ್ಲ ಎಂಬುದನ್ನು ನಾವು ಮೊದಲೇ ತಿಳಿಸಿದ್ದೆವು ಅವನು ಖುಲಾಸೆಗೊಂಡಿರುವುದು ನಮಗೆ ಖುಷಿ ತಂದರೂ ,ನೈಜವಾದ ಅಪರಾಧಿಗಳ ಪತ್ತೆಯಾಗಿಲ್ಲ,ತೃಪ್ತಿ ತಂದಿಲ್ಲ ಎಂಬುದನ್ನು ಇಟ್ಟುಕೊಂಡು ನ್ಯಾಯಕ್ಕಾಗಿ ಹೋರಾಟದ ಹಾದಿ ಇಳಿದಿವೆ. ಸಂತೋಷ್ ರಾವ್ ನಿರಪರಾಧಿಯಾದರೇ? ಅಪರಾಧಿಗಳು ಯಾರು? ಸಂತೋಷ್ ರಾವ್ ನಿರಾಪರಾಧಿಯಾದರೇ ಸೌಜನ್ಯರನ್ನು ಪೈಶಾಚಿಕ ಹತ್ಯೆ ಮಾಡಿದ ಆ ಕಾಮಾಂಧರರು ಯಾರು? ಅವರಿಗೆ ಗಲ್ಲು ಶಿಕ್ಷೆಯಾಗಬೇಕು ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ಕರಾವಳಿ ಕರ್ನಾಟಕ ಮಾತ್ರವಲ್ಲದೇ ರಾಜ್ಯಾದ್ಯಂತ ತಿಮ್ಮರೊಡಿ ಮಹೇಶ್ ಶೆಟ್ಟಿಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ ಅವರ ಜೊತೆಗೆ ಮೈಸೂರಿನ ಒಡನಾಡಿ ಸಂಸ್ಥೆ ಕೂಡ ಕೈ ಜೋಡಿಸಿವೆ. ಮಹೇಶ್ ಶೆಟ್ಟಿ ತಿಮ್ಮರೊಡಿಯವರು ಇದೆ ವಿಚಾರದಲ್ಲಿ ಮುಂಬೈಗೂ ಪ್ರಯಾಣ ಬೆಳೆಸಿ ಅಲ್ಲಿಯೂ ತಮ್ಮ ಪ್ರಖರ ಭಾಷಣವನ್ನು ಬೀಗಿದ್ದೂ ಈಗ ಸಧ್ಯ ಕರಾವಳಿಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಡೆಲ್ಲಿ ತನಕವೂ ಹೋಗಿ ನ್ಯಾಯಕ್ಕಾಗಿ ಹೋರಾಡುವುದು ಎಂದು ಗುಡುಗುತ್ತಿದ್ದಾರೆ.ಅಚ್ಚರಿಯೆಂದರೆ ಈ ಪ್ರಕರಣದಲ್ಲಿ ರಾಜ್ಯಮಟ್ಟದ,ನ್ಯೂಸ್ ಚಾನೆಲ್ ಗಳು ವಿಶೇಷ ಸುದ್ದಿ ಮಾಡದೇ ಇರುವುದು ಜೊತೆಗೆ ದೊಡ್ಡ ದೊಡ್ಡ ನ್ಯೂಸ್ ಪೇಪರ್ ಗಳೂ ಸಹಾ ಕೈ ಜೋಡಿಸದೇ ಇರುವುದು., ಕೇವಲ ಪ್ರತಿಭಟೆನಾ ಸಭೆಯ ವರದಿ ಸಣ್ಣ ಕಾಲಂನಲ್ಲಿ ಜಾಗ ಪಡೆಯುತ್ತಿದೆ ಅಷ್ಟೇ.ಆದರೆ ಹಲವಾರು ಯೌಟ್ಯೂಬ್ ಚಾನೆಲ್ ಗಳು ಎಪಿಸೋಡ್ ಮೇಲೆ ಎಪಿಸೋಡ್ ಮಾಡುತ್ತಿವೆ ವಿಪರ್ಯಾಸವೆಂದರೆ ಯೌಟ್ಯೂಬ್ ನಿಂದ ಲೀಗಲ್ ನೋಟಿಸ್ ಜಾರಿಯಾಗುತ್ತಿದೆಯಂತೆ ಸೌಜನ್ಯಳಿಗೆ ಸಂಬಂದಿಸಿದ ವರದಿ ಪ್ರಕಟವಾಗಬಾರದು ಎಂದು., ಹಾಗೂ ವಿಡಿಯೋಗಳೆಲ್ಲಾ ತನ್ನಷ್ಟೇ ಡಿಲೀಟ್ ಕೂಡ ಆಗುತ್ತಿವೆಯಂತೆ ಇದು ಒಂದು ರೀತಿಯ ಪ್ರಭಾವದ ಫಲ ಎಂದೂ ಹೇಳಲಾಗುತ್ತಿದೆ. ಧರ್ಮಾಧಿಕಾರಿಗಳನ್ನು ದೂರುದೇತಕ್ಕೆ? ಪ್ರತಿಭಟನೆಕಾರರು ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬ ವಿಚಾರ ಇಟ್ಟುಕೊಂಡು ಹೋರಾಟ ನಡೆಸದೇ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಯಾದ ಹೇಳಿಕೆಯನ್ನು ಕೊಡುತ್ತಿದ್ದಾರೆ.ಕ್ಷೇತ್ರದ ಪಾವಿತ್ರತೆಯನ್ನು ಹಾಳು ಕೆಡುವುತ್ತಿದ್ದಾರೆ ಎಂದು ದೇವಸ್ಥಾನದ ಭಕ್ತರು ಹಿತೈಷಿಗಳು ,ಅಭಿಮಾನಿಗಳು ಹೇಳುತ್ತಿದ್ದಾರೆ ಒಂದು ಲೆಕ್ಕದಲ್ಲಿ ಇದು ಸರಿ ಅನ್ನಿಸಿದರೂ ,ಇನ್ನೊಂದು ಕಡೆಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದವರು ಮುಖ್ಯವಾಹಿನಿಗೆ ಬಂದು ಒಂದು ಉತ್ತಮ ಹೇಳಿಕೆಯನ್ನು ಕೊಡುವುದು ಹಾಗೂ ಸಭೆ,ಪ್ರತಿಭಟನೆಯಲ್ಲಿ ಇರುವಿಕೆಯನ್ನು ತೋರ್ಪಡಿಸದೇ ಇರುವುದು ಹೋರಾಟಗಾರರಿಗೆ ವಸ್ತು ಆಗುತ್ತಿರುವುದು ಎನ್ನುವುದು ನನ್ನ ಅಭಿಪ್ರಾಯ ! ದೇಶದ ಪ್ರಾಚೀನ, ಜನಪ್ರೀಯ, ಪಾವಿತ್ರತ್ಯೆಯ ಕ್ಷೇತ್ರಲ್ಲಿ ಸ್ಥಾನ ಪಡೆದ ಧರ್ಮಸ್ಥಳ ಇದು ಪುಣ್ಯ ಕ್ಷೇತ್ರವಾದರೂ ಅದೊಂದು ಗ್ರಾಮ.ಈ ಗ್ರಾಮಕ್ಕೆ ಸಂಬಂಧ ಪಟ್ಟಲ್ಲಿ ಘಟನೆ ನೆಡದಿರುವುದು. ಸಂತ್ರಸ್ತೆ ವ್ಯಾಸಂಗ ಮಾಡುತ್ತಿರುವ ಕಾಲೇಜು ಕೂಡಾ ಧರ್ಮಸ್ಥಳ ಸಂಸ್ಥೆಗೆ ಒಳಪಟ್ಟದ್ದು ಹಾಗೂ ಅಲ್ಲಿ ಕೆಲಸ ನಿರ್ವಹಿಸುತ್ತಿರುವವರ ಮೇಲೆ ಆರೋಪ ಬಂದಿರುವ ಕಾರಣ ದಿಂದಲಾದರೂ ,ಇದಕ್ಕೆಲ್ಲಾ ತೆರೆ ಎಳೆಯಲು ಧರ್ಮಸ್ಥಳ ಧರ್ಮಾಧಿಕಾರಿ ,ಪೂಜ್ಯರು, ಖಾವಂದರು, ಮಾತನಾಡುವ ಮಂಜುನಾಥ ಎಂದೇ ಹೆಸರು ಪಡೆದಿರುವ ಡಿ.ವೀರೇಂದ್ರ ಹೆಗ್ಗಡೆಯವರು ಆಟ್ಲಿಸ್ಟ್ ಒಂದಾದರೂ ಬಹಿರಂಗ ಸಭೆಯಲ್ಲಿ ಪಾಲ್ಕೊಂಡಿದ್ದರೇ, ಕ್ಷೇತ್ರಕ್ಕೆ ಮತ್ತು ಅವರಿಗೆ ಗೌವರ ಸಲ್ಲುತ್ತಿತ್ತು,ಸಾಕಷ್ಟು ನಮ್ಮಂತ ಅಭಿಮಾನಿಗಳಿಗೆ,ಇನ್ನು ಹೋರಾಟಗಾರರಿಗೆ, ಟೀಕಾಗಾರರಿಗೂ ಚಾಟಿ ಏಟು ಸಿಗುತ್ತಿತ್ತು.ಇದೆಕ್ಕೆಲ್ಲಾ ಉತ್ತರ ಕೊಡುತ್ತಾ ಈ ಸಭೆ.ಹೋರಾಟಗಳಿಗೆ ತೆರಳಲು ಸಮಯದ ಕೊರತೆ ಹಾಗೂ ಅದು ಅವರ ಕರ್ತ್ಯವ್ಯಪರತೆಗೆ ನಿಲುಕದ್ದು .ಸಣ್ಣ ಸೌಜನ್ಯಕ್ಕಾದರೂ,ನಾಡಿನ ಏಳಿಗೆಯನ್ನು ಬಯಸುತ್ತಿರುವ,ಬೆಸೆಯುತ್ತಿರುವ ಮನೋಭಾವನೆಯಲ್ಲಿರುವ ಪೂಜ್ಯರು ರಾಜ್ಯಾದ್ಯಾ೦ತ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವ ಸಹಾಯ ಸ್ತ್ರೀಸಂಘಗಳ ಮೂಲಕ ಮಹಿಳೆಯರಿಗೆ ಸ್ವಾವಲಂಭಿ ಸ್ಥಿರತೆಯನ್ನು ಕಲ್ಪಿಸಿರುವವವರು. ಈ ಸೌಜನ್ಯ ವಿಚಾರವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಪಡೆಯುತ್ತಿರುವುದರಿಂದ ತನ್ನ ಇರುವುಕೆಯನ್ನು ತೋರ್ಪಡಿಸಬೇಕಿತ್ತು ಎಂಬುದು ಹಲವರ ಅಭಿಪ್ರಾಯ. ಸಿಬಿಐಗೆ ಈ ಪ್ರಕರಣವನ್ನು ವಯಿಸುವಲ್ಲಿ ಧರ್ಮಾಧಿಕಾರಿಗಳ ಪಾತ್ರವೂ ದೊಡ್ಡದು ಇದೆ ಎಂಬುದನ್ನುಇಲ್ಲಿ ಸ್ಮರಿಸಿಕೊಳ್ಳಬೇಕು! ಅವರು ಅಂದು ಸಿಬಿಐಗೆ ವರ್ಗಾಹಿಸುವುದಕ್ಕೆ ಗ್ರಹ ಮಂತ್ರಿಗಳಾಗಿದ್ದ ಆರ್ ಅಶೋಕ್ ಅವರಿಗೆ ಪತ್ರವನ್ನೂ ಬರೆದಿದ್ದರು.ಎಲ್ಲೋ ಭೌತಿಕವಾಗಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದರೇ ಅವರ ಕೀರ್ತಿಮಕುಟಕ್ಕೆ ಇನ್ನೊಂದು ಗರಿ ಸಿಗುತ್ತಿತ್ತು! ಸಂತೋಷ್ ರಾವ್ ನಿಜವಾಗಿಯೂ ಕ್ರತ್ಯ ಎಸಗಿರಬಹುದೇ? ಆತ ಪೋಲೀಸರ ಮುಂದೆ ಹೌದು ನಾನೇ ಮಾಡಿದ್ದು ಎಂದು ಒಪ್ಪಿಕೊಂಡಿದ್ದು ಯಾಕೆ? ಆತನ ಮೈ ಮೇಲೆ ಪರಚಿದ ಗಾಯಗಳು ಸೌಜನ್ಯಳದ್ದೇ? ಆತ ಬಾಹುಬಲಿ ಬೆಟ್ಟದಲ್ಲಿ ಸಿಕಿದ್ದಾಗ ಇಲ್ಲೇನು ಮಾಡುತ್ತಿದ್ದೆ ಎಂದು ದೇವಸ್ಥಾನದ ಸಿಬ್ಬಂದಿ ಕೇಳಿದಾಗ ಇನ್ನಿಬ್ಬರು ಇದ್ದಾರೆ ಅವರಿಗಗಾಗಿ ಕಾಯುತ್ತಿದ್ದೇನೆ ಎಂದವನು ಕ್ಷಣ ಮಾತ್ರದಲ್ಲಿ ವಿಚಿತ್ರಕಾರಿಯಾಗಿ ಅಲ್ಲಿಂದ ಓಡಿ ಹೋಗಲು ಪ್ರಯತ್ನಪಟ್ಟಿದ್ದು ಯಾಕೆ? ಸೌಜನ್ಯಳ ಮಾವನ ಹೋಟೆಲ್ ನಿಂದ ಪ್ರತಿದಿನ 3 ಪಾರ್ಸೆಲ್ ಊಟ ತೆಗೆದು ಕೊಂಡು ಹೋಗುತ್ತಿದ್ದುನಿಜವೇ? ಕರಾಟೆ ಬ್ಲಾಕ್ ಬೆಲ್ಟ್ ಆಗಿಯೂ, ಮಾನಸಿಕ ವ್ಯಕ್ತಿ ತರಹ ಗೋಚರಿಸುತ್ತಿದ್ದ ಈತ, ನಿಜಕ್ಕೂ ನಾಟಕವಾಡುತ್ತಿದ್ದಾನೆಯೇ? ಬ್ರೈನ್ ಮ್ಯಾಪಿಂಗ್ ಗೆ ಯಾಕೆ ಒಪ್ಪಿಕೊಂಡಿಲ್ಲ? ಲೈಂಗಿಕ ಸಾಮರ್ಥ್ಯವಿಲ್ಲಾ ಎಂದು ಹೇಳಲಾಗುತ್ತಿದ್ದರೂ ಈತ ಈ ಹಿಂದೆ ಅತ್ಯಾಚಾರಕ್ಕೆ ಪ್ರಯತ್ನಿಸಿ ವಿಫಲಗೊಂಡಿದ್ದು ಸುದ್ದಿಯಾಗಿದ್ದು ಸುಳ್ಳಾ?ಸಂತೋಷ್ ರಾವ್ ನಿಜವಾಗಿಯೂ ಕ್ರತ್ಯ ಎಸಗಿರಬಹುದು ಎನ್ನುವುದಕ್ಕೆ ಕೆಲವೊಂದು ಸಾಕ್ಷಿ ಒದಗಿಸುತ್ತಿವೆಯಾದರೂ,ಯಾವುದನ್ನೂ ಸತ್ಯ ಎಂದು ಒಪ್ಪುವಂತಿಲ್ಲ.ಒಂದು ಲೆಕ್ಕಚಾರದಲ್ಲಿ ಸೌಜನ್ಯಳನ್ನು ರೇಪ್ ಅಂಡ್ ಮರ್ಡರ್ ಮಾಡಿ ಆತ ಮರುದಿನ ಅಂದ್ರೆ ಕ್ರತ್ಯ ನಡೆದ ಸ್ಥಳದಿಂದ ಸುಮಾರು ಒಂದೂವರೆ ಕಿಮೀ ದೂರದಲ್ಲಿರುವ ಬಾಹುಬಲಿ ಬೆಟ್ಟದಲ್ಲಿ ಕಾಣಸಿಗುತ್ತಾನೆ ಅಲ್ಲಿಯೇ ಆತನನ್ನು ಹೋರಾಟಗಾರರು ಹೇಳುತ್ತಿರುವ ಆರೋಪಿಗಳ ಪೈಕಿ ಮಲ್ಲಿಕ್ ಜೈನ್ ಹಿಡಿದು ಸ್ಥಳಿಯರ ಸಹಕಾರ ದಿಂದ ಪೊಲೀಸರಿಗೆ ಒಪ್ಪಿಸುತ್ತಾರೆ ಅಂದರೆ ಸಂತೋಷ್ ರಾವ್ , ಹತ್ಯಾಚಾರ ಮಾಡಿ ಅಲ್ಲಿಯೇ ಇರಲು ಸಾಧ್ಯವೇ? ಆತ ಅಲ್ಲಿಂದ ಬೇರೆಕಡೆ ಸ್ಥಳಾಂತರ ಆಗಬೇಕಿತ್ತು ಅಲ್ವೇ ? ಇನ್ನು ಆತ ಅಲ್ಲಿ ಹೇಳಿದ್ದು ಇನ್ನಿಬ್ಬರು ಇದ್ದಾರೆ ಅವರನ್ನು ಕಾಯುತ್ತೀದ್ದೇನೆ ಎಂದವನು ದಿಢೀರ್ ಎಂದು ಓಟಕ್ಕಿತ್ತಿದ್ದು ಯಾಕೆ? ನಿಜವಾಗಿಯೂ ಅಲ್ಲಿ ಆತನ ಜೊತೆ ಇನ್ನಿಬ್ಬರು ಇದ್ದಿದ್ದಾರೆಯೇ? ಇದ್ದಿರಲೂ ಬಹುದು ಎಂಬ ಅಂಶ ಒಂದೆಡೆ ಸಂಶಯ ಮೂಡಿಸುತ್ತದೆ ಕಾರಣ ಆತನ ಘಟನೆ ನಡೆಯುವುದರ ಮೊದಲು 2-3 ದಿನಗಳಿಂದ ಸೌಜನ್ಯ ಮಾವ ವಿಠ್ಠಲ್ ಗೌಡ ಅವರ ಹೋಟೆಲ್ ನಿಂದ ಮೂರು ಊಟ ಪಾರ್ಸೆಲ್ ತಗೆದು ಕೊಂಡು ಹೋಗುತ್ತಿದ್ದದ್ದು, ಹಾಗೂ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರ ಪ್ರಥಮ ಹಂತದ ಹೇಳಿಕೆಯಲ್ಲಿ ಇದನ್ನು ಒಬ್ಬ ವ್ಯಕ್ತಿಯಿಂದ ಮಾಡಲು ಅಸಾಧ್ಯ, ಗ್ಯಾಂಗ್ ರೇಪ್ ಆಗಿರುವ ಸಾಧ್ಯತೆಗಳಿವೆ ಎಂಬಾವುಗಳೆಲ್ಲಾ ಈತನೇ ಅಪರಾಧಿ ಎನ್ನುವುದಕ್ಕೆ ಪುಷ್ಟಿ ನೀಡುತ್ತಿವೆ.ಇನ್ನು ಆತ ಪೋಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದ ಎಂಬ ಮಾತು ಕೂಡ ಕೇಳಿಬರುತ್ತಿದೆ. ನಾನೇ ಮಾಡಿದ್ದು ಎಂದು ಅಪಹರಿಸಿದ ರೀತಿಯನ್ನೂ ಸಹ ಆತ ಸಂಕ್ಷಿಪ್ತವಾಗಿ ಪೊಲೀಸರಿಗೆ ತಿಳಿ ಹೇಳಿದ್ದನಂತೆ .ಕ್ರತ್ಯ ನಡೆದ ಸ್ಥಳಕ್ಕೆ ತೆರಳಬೇಕಾದರೆ ಎರಡು ಮಾರ್ಗಳು., ಒಂದು ಸುತ್ತು ಬಳಿಸಿ ಸಾಗಬೇಕಾದರೇ ಇನ್ನೊಂದು ರಸ್ತೆ ಒಂದು ಹರಿಯುವ ತೊರೆಯನ್ನು ದಾಟಿ ಹೋಗಬೇಕು., ಅದು ಮಳೆಗಾಲದ ಸಮಯವಾದುದ್ದರಿಂದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತದೆ ಅದನ್ನು ದಾಟಿ ಸಾಗುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತದೆ. ಸಂತೋಷ್ ಆ ತೊರೆಯನ್ನು ದಾಟಿ ಅವಳನ್ನು ಎತ್ತಿ ಹೋಗಿದ್ದಾನೆಂದು, ಇನ್ನು ಅದರ ಪಕ್ಕದಲ್ಲಿ ಪ್ರಕ್ರತಿ ಚಿಕಿಸ್ಥಳಾಯ ಇದ್ದೂ, ಅದರ ವಾಚ್ ಮೆನ್ ನ ದ್ರಷ್ಟಿ ಮರೆಮಾಚಲು ಸಣ್ಣ ತಿರುವು ಇರುವುದರಿಂದ ಸುಲಭವಾಗಿತ್ತು ಎಂದೂ ಬಾಯಿ ಬಿಟ್ಟ ವಿಚಾರ ಪೊಲೀಸ್ ದಾಖಲಾತಿಯಲ್ಲಿಇದೆಯಂತೆ. ಆತನ ಪರವಾಗಿರುವ ಲಾಯರ್ ಮೋಹಿತ್ ಕುಮಾರ್ ಇದೆಲ್ಲಾ ಸುಳ್ಳು ಪೊಲೀಸರು ಬೆದರಿಸಿ ಹಲ್ಲೆ ಮಾಡಿದ್ದರ ತರುವಾಯ ಆತ ಹೀಗೆ ಒಪ್ಪಿಕೊಂಡು ಹೇಳಿದ್ದಾನೆ ಎಂದು ಆರೋಪ ಮಾಡುತ್ತಾರೆ.ಕೆಲವೊಂದು ಮೂಲಗಳ ಪ್ರಕಾರ ಆತ ಮಾನಸಿಕ ಅಸ್ವಸ್ಥ ಅಲ್ಲವೇ ಅಲ್ಲ ಆತ ಆ ತರಹ ನಾಟಕ ಮಾಡಿಕೊಂಡಿರುವವನು ,ತೀರ್ಥ ಕ್ಷೇತ್ರಗಳ ಸುತ್ತುವ ಭಕ್ತಿ,ಬಯಕೆಯನ್ನು ಹೊಂದಿರುವ ಈತ ಆದಾಗಲೇ ಶಬರಿ ಮಾಲೆ ಯಾತ್ರೆಗೆ ವ್ರತ ನಿರತನಾಗಿದ್ದನಂತೆ ಅದಕ್ಕೆ ಗಡ್ಡ ಮೀಸೆ ಹಾಗೂ ಕೂದಲುಗಳನ್ನು ಬಿಟ್ಟಿದ್ದ.ಕಾರ್ಕಳದ ಅಯ್ಯಪ್ಪ ಮಾಲಾಧಾರಿಗಳ ಜೊತೆ ಅಲ್ಲಿನ ಶಿಬಿರದಲ್ಲಿದ್ದ ಆತ ಆಗಾಗ ಧೂಮಪಾನವನ್ನು ಮಾಡುತ್ತಿದ್ದನಂತೆ ಇದನ್ನು ಕಣ್ಣಾರೆ ಕಂಡ ಉಳಿದ ವ್ರತಧಾರಿಗಳು ಸಾಕಷ್ಟು ಸಾರಿ ಆತನಿಗೆ ಬುದ್ದಿ ಹೇಳಿದರೂ, ಕೇಳಿಸಿ ಕೊಳ್ಳದ ಆತ ನನ್ನು ಅಲ್ಲಿಂದ ಬೀಳ್ಕೊಟ್ಟಿದ್ದರು ಎಂದು ಆತನ ಜೊತೆಗಿದ್ದ ಮಾಲಾಧಾರಿಯೊಬ್ಬರ ಹೇಳಿಕೆಯಿಂದ ತಿಳಿಯುತ್ತಿದೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ನ್ನು ಹೊಂದಿರುವವನು, ಇಂಜಿನಿಯರಿಂಗ್ ಪದವಿ ಪಡೆದು ಸಬ್ ಕಾಂಟ್ರಾಕ್ಟರ್ ಆಗಿ ಉದ್ಯೋಗ ನಿಭಾಯಿಸಿದ ವ್ಯಕ್ತಿ. ಕರಾಟೆ ಪಟುವಾಗಿದ್ದರಿಂದ ಈತ ನಿಂದ ಅತ್ಯಾಚಾರ ಕೊಲೆ ಮಾಡಲು ಸಾಧ್ಯತೆಗಳಿರಬಹುದು ಎಂಬ ಅಭಿವ್ಯಕ್ತಿಯೂ ಇದೆ.ಇನ್ನು ಈತ ಬ್ರೈನ್ ಮ್ಯಾಪಿಂಗ್ ಗೆ ಒಳಪಟ್ಟಿಲ್ಲ., ಕಾರಣ ಆರೋಗ್ಯ ಸ್ತಿಮಿತದಲ್ಲಿ ಇಲ್ಲ ಎಂಬ ಕಾರಣವೊಡ್ಡಿ ಆತನ ಪರ ಅಡ್ವಕೇಟ್ ಹೇಳಿದ್ದರು.ಬೆಂಗಳೂರಿನ ನಿಮಾನ್ಸ್ ನ ಖ್ಯಾತ ಮನೋವೈದ್ಯರು, ಪ್ರೊಫೆಸರ್ ಆಗಿರುವ ಡಾI ಸಿ.ಆರ್.ಚಂದ್ರಶೇಖರ್ ಅವರು ಆತನನ್ನು ಪರಿಶೀಲಿಸಿ, ಆತ ಆರೋಗ್ಯದಲ್ಲಿ ಫೈನ್ ಅಂಡ್ ಫಿಟ್ ನಲ್ಲಿ ಇದ್ದಾನೆ ಎಂಬ ಸರ್ಟಿಫಿಕೇಟ್ ಅನ್ನೂ ಕೊಟ್ಟಿರುತ್ತಾರೆ. ಆದರೂ ಆತ ಮಂಪರು ಪರೀಕ್ಷೆಗೆ ಒಳಗಾಗಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.!ಆತನ ಮೈ ಮೇಲೆ ಇರುವ ಪರಚಿದ ಗಾಯಗಳು 72ಗಂಟೆಗಳ ಮೊದಲಿನ ಗುರುತುಗಳು ಎಂದು ವ್ಯದ್ಯಕೀಯ ತಪಾಸಣೆ (ಎಫ್ ಎಸ್ ಎಲ್) ಯಲ್ಲಿ ರುಜುವಾತುಗೊಂಡಿರುತ್ತದೆ. ಆತನಿಗೆ ಲೈಂಗಿಕ ಸಾಮರ್ಥ್ಯವಿಲ್ಲಾ ಎಂದು ಆತನ ಅಡ್ವಕೇಟ್ ಹೇಳುತ್ತಿದ್ದರೂ, ಎಲ್ಲೋ ಒಂದು ಗುಮಾನಿ ನಮ್ಮನ್ನು ಕಾಡದೇ ಇರದು ಈ ಹಿಂದೆ ಆತ ಕಾರ್ಕಳ ಹಾಗೂ ಬೆಂಗಳೂರಿನ ಯುವತಿಯ ಮೇಲೆ ಅತ್ಯಾಚಾರದ ವಿಫಲಯತ್ನದ ಬಗ್ಗೆ ದೂರು, ಹಾಗೂ ಪತ್ರಿಕಾ ವರದಿಗಳು ಸಾಕ್ಷಿ ಒದಗಿಸುತ್ತಿದೆ.ಇದೆಲ್ಲವೂ ಸಾಕ್ಷಿ ನುಡಿಯುತ್ತಿದ್ದರೂ, ಈತನೇ ಅಪರಾಧಿ ಎಂದು ಹೇಳುವಂತಿಲ್ಲ ಕಾರಣ ಸರಿಯಾದ ಜೀವಂತ ಸಾಕ್ಷಿ ಇಲ್ಲವೇ ಇಲ್ಲ.!ಕೋರ್ಟ್ ಪ್ರಾಸಿಕ್ಯೂಷನ್ ನಲ್ಲಿ ವೈಫಲ್ಯೆತೆಯನ್ನು ಕಂಡು ಕೊಂಡಿರಬಹುದೇ ಗೊತ್ತಿಲ್ಲ.ಇನ್ನು ಬಿಡುಗಡೆಗೊಂಡ ಬಳಿಕ ಈ ಸಂತೋಷ್ ರಾವ್ ಯಾರ ಕಣ್ಣಿಗೂ ಕಾಣಿಸಿಲ್ಲ., ಯಾವುದೋ ದೇವಸ್ಥಾನದಲ್ಲಿ ಇದ್ದನೆಂದು, ಆತನಿಗೆ ಮುಖ್ಯ ವಾಹಿನಿಗೆ ಬಂದು ಮಾಧ್ಯಮದ ಮುಂದೆ ನಡೆದ ಘಟನೆಯನ್ನು ವಿವರಿಸಬಹುದಿತ್ತು ಅಲ್ವೇ? ಆತ ಯಾಕೆ ಬರುತ್ತಿಲ್ಲ? ಆತನೇ ಸ್ವತಃ ಹೇಳಿಕೆ ಕೊಟ್ಟರೆ ಅದಕ್ಕೆ ಪೂರಕವಾಗಿ ಮಾಧ್ಯಮದವರು ಪ್ರಶ್ನೆ ಇಟ್ಟರೆ ಎಲ್ಲೊ ಒಂದುಚೂರು ಸತ್ಯ ದರ್ಶನವಾಗಹುದೇನೋ? ಆ ನಾಲ್ವರ ಸುತ್ತಾ ಸೌಜನ್ಯ ಹತ್ಯಾಚಾರ ನಡೆದದ್ದು 2012ರಲ್ಲಿ, ಸೌಜನ್ಯ ಕುಟುಂಸ್ಥರು 2013ರ ಹೊತ್ತಿಗೆ 4 ಜನರು ಇದರಲ್ಲಿ ಬಾಗಿಯಾಗಿದ್ದಾರೆ ಅವರು ಧರ್ಮಸ್ಥಳ ದೇವಸ್ಥಾನಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳಾದ ನಿಶ್ಚಲ್ ಜೈನ್, ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಎಂಬ ನಾಲ್ವರು ಎಂದು ಆರೋಪಿಸುತ್ತಾರೆ. ಕೆಲವೊಂದು ಪೂರಕವಾದ ಸಾಕ್ಷಿಗಳನ್ನೂ ಮುಂದೆ ಇಡುತ್ತಾರೆ.ಸೌಜನ್ಯ ಹತ್ಯೆ ಆದ ಆ ದಿನ ಸಂಜೆ ಬೇರೊಂದು ಹುಡುಗಿಯನ್ನು ಅಪಹರಿಸುವ ಸಂಚು ರೂಪಿಸುತ್ತಿದ್ದದ್ದನ್ನು ಮರೆಯಲ್ಲಿ ಸೌಜನ್ಯ ಕುಟುಂಬದ ಸದಸ್ಯರೊಬ್ಬರು ಕೇಳಿ ತಿಳಿದುಕೊಂಡಿದ್ದನ್ನು ಹೇಳುತ್ತಾರೆ. ಆಗ ಆ ಯುವತಿ ಅದೃಷ್ಟವಶಾತ್ ತಪ್ಪಿ ಹೋದ ಕಾರಣ ಅದೇ ಸಮಯಕ್ಕೆ ಸೌಜನ್ಯ ಬಸ್ ಇಳಿದು ಮನೆ ಕಡೆ ಸಾಗುವ ಸಂದರ್ಭ ಆಕೆಯಲ್ಲಿ ಕಿಡ್ನಾಪ್ ಮಾಡಿ ಸನಿಹದ ಲಾಡ್ಜ್ ನಲ್ಲಿ ಈ ನಾಲ್ವರು ಗ್ಯಾಂಗ್ ರೇಪ್ ಮಾಡಿ ಹತ್ಯಮಾಡಿ ಬೆಳಿಗ್ಗೆನ ಜಾವ ತಂದು ಇಲ್ಲಿ ಹಾಕಿದ್ದಾರೆ ,ಆ ದಿನ ರಾತ್ರಿ ನಾವು, ಸಾವಿರಕ್ಕೂ ಅಧಿಕ ಮಂದಿ ಇಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಡೆಡ್ ಬಾಡಿ, ಮರುದಿನ ಸಿಕ್ಕಿದ್ದು ನಮಗೆ ಪೂರ್ತಿ ಅನುಮಾನ ಕಾಡಿದೆ ,ಆಕೆಯ ಚಪ್ಪಲಿ ಹಾಗೂ ಕೊಡೆ ಕಾಣೆಯಾಗಿದೆ ,ಆ ದಿನ ರಾತ್ರಿ ಇಡೀ ಮಳೆ ಇತ್ತು ಆದರೂ ಬ್ಯಾಗ್ನಲ್ಲಿದ್ದ ಪುಸ್ತಕಗಳು ಒದ್ದೆಯಾಗಿಲ್ಲ,ಸೌಜನ್ಯಾಳ ನ್ನು ನಾಲ್ವರು ಅಪಹರಿಸುತ್ತಿರುದನ್ನು ನೇರವಾಗಿ ವರ್ಷ ಎನ್ನುವ ವಿದ್ಯಾರ್ಥಿನಿ ಹಾಗೂ ಪರಿಮಳ ಟೀಚರ್ ನೋಡಿದ್ದರ ಬಗ್ಗೆ ಮುಂತಾದ ಹೇಳಿಕೆಗಳನ್ನು ಹೋರಾಟಗಾರರು ಹಾಗೂ ಮನೆಯವರು ನೇರವಾಗಿ ನುಡಿಯುತ್ತಾರೆ.
ಇದರಲ್ಲಿ ಧೀರಜ್ ಕೆಲ್ಲಾ ಮತ್ತು ಮಲ್ಲಿಕ್ ಜೈನ್ ದೇವಸ್ಥಾನದಲ್ಲಿ ಉದ್ಯೋಗಿಯಾಗಿದ್ದರೇ, ಉದಯ್ ಜೈನ್ ಆಟೋ ರಿಕ್ಷಾ ಇಟ್ಟು ಬಾಡಿಗೆ ಮಾಡುವವನು ಇನ್ನು ನಿಶ್ಚಲ್ ಜೈನ್ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ತಮ್ಮನ ಮಗ ಆತ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಆತ ಈ ಘಟನೆ ನಡೆದ ಸಮಯದಲ್ಲಿ ಊರಿನಲ್ಲಿ ಇರಲೇ ಇಲ್ಲ ಎಂಬ ದಾಖಲೆಯನ್ನು ನೀಡುತ್ತಾರೆ.ಸೌಜನ್ಯ ಮನೆಯವರ ಆರೋಪದಂತೆ ಈ ನಾಲ್ವರ ಬಗ್ಗೆ ನಾವು ಪೊಲೀಸರಿಗೆ ದೂರು ಕೊಟ್ಟರೂ, ಅವರು ಅದನ್ನು ಅಂಗೀಕಾರ ಮಾಡಲಿಲ್ಲ ಎನ್ನುತ್ತಾರೆ. ದೇವಸ್ಥಾನದ ಕೆಲಸದವರು ಹಾಗೂ ತನ್ನ ತಮ್ಮನ ಮಗನಿಗಾಗಿ ವೀರೇಂದ್ರ ಹೆಗ್ಗಡೆಯವರು ಅವರೆನ್ನೆಲ್ಲರನ್ನು ಈ ಪ್ರಕರಣದಲ್ಲಿ ರಕ್ಷಿಸಲು ,ಬಚಾವ್ ಮಾಡಿದ್ದಾರೆ,ಅವರ ಒತ್ತಡಕ್ಕಾಗಿ ಎಲ್ಲವೂ ಮುಚ್ಚಿ ಹೋಗಿದೆ ಮತ್ತು ಅವರ ಪ್ರಭಾವ ಇದರ ಮೇಲೆ ಖಂಡಿತವಾಗಿಯೂ ಬೀರಿದೆ ಎಂಬ ಮಾತನ್ನು ಇಂದಿಗೂ ಹೋರಾಟಗಾರರು ಹೇಳುತ್ತಾ ಬರುತ್ತಿದ್ದಾರೆ.ನಿಶ್ಶಲ್ ಜೈನ್ ಸದ್ಯ ಅಮೆರಿಕದಲ್ಲಿರುವ ಕಾರಣ ಉಳಿದ ಈ ಮೂವರು ಪತ್ರಿಕಾಗೋಷ್ಠಿ ನೆಡಸಿ ತಮ್ಮ ಮೇಲಿನ ಆರೋಪಕ್ಕೆ ತೆರೆ ಏಳುವ ಪ್ರಯತ್ನ ಮಾಡಿದ್ದಾರೆ.ನಮ್ಮ ತನಿಖೆ ಆಗಿದೆ ಸಿಓಡಿ ,ಸಿಬಿಐ ನಮ್ಮನ್ನು ವಿಚಾರಣೆ ಮಾಡಿದ್ದಾರೆ ,ಬ್ರೈನ್ ಮ್ಯಾಪಿಂಗ್ ಅವಶ್ಯತೆ ಇಲ್ಲ ಅಂದ್ರೂ ನಮ್ಮ ಮೇಲೆ ಆರೋಪ ಬಂದಿರುವುದಕ್ಕೆ ಸ್ವತಃ ನಾವಾಗಿಯೇ ಅದಕ್ಕೂ ಒಳಪಟ್ಟಿದ್ದೇವೆ ಎಂದು ಎಲ್ಲಾ ಡೀಟೈಲ್ಸ್ಗಳನ್ನ ಮಾಧ್ಯಮದ ಮುಂದೆ ಇಡುತ್ತಾರೆ. 2016ರಲ್ಲಿ ಶಂಕಿತ ಆರೋಪಿಗಳಾದ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು ಹಾಗೂ ಮೊನ್ನೆ ಮೊನ್ನೆ ಸೌಜನ್ಯ ತಾಯಿ ಕುಸುಮಾವತಿವರ ಮುಂದೆ ಅಣ್ಣಪ್ಪ ಸ್ವಾಮಿ ದೇವಸ್ಥಾನದಲ್ಲಿ ನಾವು ಯಾವುದೇ ತಪ್ಪು ಮಾಡಿಲ್ಲ ನಮಗೂ ಈ ಕೇಸಿಗೂ ಸಂಭಂದವಿಲ್ಲ ಎಂದು ಪ್ರಮಾಣವನ್ನೂ ಮಾಡಿದ್ದರು.ಒಟ್ಟಾರೆ ಈ ಪ್ರಕರಣದಲ್ಲಿ ಯಾರನ್ನು ನಂಬಬೇಕೋ ಯಾರ ಮೇಲೆ ವಿಶ್ವಾಸ ಇಡಬೇಕೋ ಎಂಬ ಜಿಜ್ಞಾಸೆ ಎಲ್ಲರಲ್ಲೂ ಉಂಟು ಮಾಡಿದೆ! ಉಸಿರುಗಟ್ಟಿಸುತ್ತಿರುವ ಈ ಪ್ರಕರಣಕ್ಕೆ ಒಂದೇ ಪರಿಹಾರ ಮರು ತನಿಖೆ ನಡೆಸುವುದು.! ಅದು ಅಷ್ಟು ಸುಲಭವಲ್ಲ! ಯಾಕೆಂದರೆ ಹನ್ನೊಂದು ವರ್ಷ ಕಳೆದು ಹೋಗಿದೆ ಹೆಚ್ಚಿನ ಸಾಕ್ಷಿಗಳೂ ನಾಶವಾಗಿವೆ. ಉಳಿದಿರುವ ದಾರಿ ಯೊಂದೇ ಅದು ಸಭೀಕರ ಸಮುಖದಲ್ಲಿ ಸಂತೋಷ್ ರಾವ್ ಗೆ ಹಾಗೂ ಆರೋಪ ಬಂದವರನ್ನು ಬ್ರೈನ್ ಮ್ಯಾಪಿಂಗ್ ಗೆ ಒಳಪಡಿಸುವುದು ಇದರಿಂದ ಕಿಂಚಿತ್ ಸತ್ಯ ಹೊರಬೀಳಬಹುದೇನೋ? ನ್ಯಾಯಾಧೀಶರು ಏನು ಹೇಳುತ್ತಾರೆ? ಅತ್ಯಾಚಾರದ ನಂತರ ವೈದ್ಯರು ಸಂಗ್ರಹಿಸಿದ ಮಾದರಿಗಳು ಪ್ರಕರಣಕ್ಕೆ ಪೂರಕವಾಗಿರಲಿಲ್ಲ,ಡಿಎನ್ಎ ವರದಿಯಲ್ಲಿಯೂ ಆರೋಪಿಗಳ ವಿರುದ್ಧ ಯಾವುದೇ ಸಕಾರಾತ್ಮಕ ಸಾಕ್ಷ್ಯಗಳಿಲ್ಲ.ಆರೋಪಿಯ ಬಟ್ಟೆಯ ಮೇಲೆ ಸೆಮಿನಲ್ ಕಲೆಗಳು ಅಥವಾ ಸಂತ್ರಸ್ತೆ ಕೂದಲು ಕಂಡುಬಂದಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ, ಘಟನೆ ನಡೆದ ಸ್ಥಳದಿಂದ ಏನೂ ಪತ್ತೆಯಾಗಿಲ್ಲ, ಒಂದು ವೇಳೆ ಹೇಳಿದ ಸ್ಥಳದಲ್ಲಿ ಅತ್ಯಾಚಾರ ನಡೆದಿದ್ದರೆ, ಆರೋಪಿಗಳ ಕೂದಲು, ಹೆಜ್ಜೆಗುರುತುಗಳು, ಯಾವುದೇ ಸುಳಿವುಗಳನ್ನು ಕಂಡುಹಿಡಿಯಲು ತಜ್ಞರ ತಂಡವನ್ನು ಕರೆಸಲು ತನಿಖಾಧಿಕಾರಿಗೆ ಏನು ಅಡ್ಡಿಯಾಯಿತು? ನೀರ್ಲಕ್ಷೆ ದೋರಣೆಯನ್ನು ತೋರಿದ್ದರೇ? ಅಥವಾ ಯಾರದ್ದಾದರೂ ಪ್ರಭಾವ ಇದ್ದಿರಬಹುದೇ? ಹೀಗೇಕೆ ಗೊಂದಲ? ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧ ಪಟ್ಟವರು, ಅಭಿಮಾನಿಗಳು ಸೌಜನ್ಯ ಪರವಾದ ಹೋರಾಟಗಳಲ್ಲಿ ಅಡ್ಡಿ ಪಡಿಸುವ ಹಾಗೂ ಅದಕ್ಕೆ ವಿರುದ್ಧ ವಾದ ಹೇಳಿಕೆಯನ್ನು ಕೊಡುವ ಮೂಲಕ ಎಲ್ಲೊ ಹೋರಾಟಗಾರರ ದ್ವೇಷಕ್ಕೆ ಹಾಗೂ ಅನುಮಾನಕ್ಕೆ ಕಾರಣೀಭೂತರಾಗುತ್ತಿದ್ದಾರೆ ಎಂದು ಭಾಸವಾಗುತ್ತಿದೆ.ಗೊಂದಲವನ್ನು ಏರ್ಪಡಿಸುತ್ತಿರುವವರ ಹೇಳುವಂತೆ ಕ್ಷೇತ್ರಕ್ಕೆ ಅವಹೇಳನಕಾರಿ, ಅಪಮಾನ ತರುವ ರೀತಿಯಲ್ಲಿ ಪ್ರತಿಭಟನಾಕಾರರು ನೆಡೆದು ಕೊಳ್ಳುತ್ತಿದ್ದಾರೆ ಎಂದು.ಸಂತ್ರಸ್ತೆ ಸೌಜನ್ಯ ಧರ್ಮಸ್ಥಳ ಗ್ರಾಮಕ್ಕೆ ಸೇರಿದವಳು. ಕ್ಷೇತ್ರಕ್ಕೆ ಸಂಬಂಧಿಸಿದವರು ನ್ಯಾಯಪರವಾದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬಾವೋದ್ವೇಗಕ್ಕೆ ಒಳಗಾಗುವ ಹೋರಾಟಗಾರರಲ್ಲಿ ಅಂತಹ ಹೇಳಿಕೆಗಳು ಮಾತಿನ ಬರದಲ್ಲಿ ಹೊರಟಿರುವದು ಸತ್ಯ. ಮೊನ್ನೆ ಉಡುಪಿಯಲ್ಲಿ ನಡೆದ ಸೌಜನ್ಯ ಪರ 'ಜನಾಗ್ರಹ' ಪ್ರತಿಭಟನೆಯಲ್ಲಿ ಒಂದಷ್ಟು ಮಂದಿ ಗೊಂದಲವನ್ನು ಏರ್ಪಡಿಸವ ಕಾರ್ಯಕ್ಕೂ ಕೈ ಹಾಕಿದ್ದರು.೨೦೦೦ ರೂಪಾಯಿ ಕೊಟ್ಟು ಹೋರಾಟ ಕೆಡಿಸಲು ದೇವಸ್ಥಾನಕ್ಕೆ ಸಂಬಂಧ ಪಟ್ಟವರು ನೀಡಿದ್ದಾರೆ ಎಂಬ ವಿಡಿಯೋ ತುಣುಕು ಒಂದು ಕೂಡಾ ಆ ಸಮಯದಲ್ಲಿ ವೈರಲ್ ಕೂಡಾ ಆಗಿತ್ತು.,ಹಾಗೆ ಇತ್ತೀಚಿಗೆ ಬೆಳ್ತಂಗಡಿಯಲ್ಲಿ ನಡೆದ ‘ಧರ್ಮಸ್ಥಳ ಹಕ್ಕೊತ್ತಾಯ' ಸಭೆಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರಿಗೆ ವೇದಿಕೆ ಏರಲು ಬಿಡದೇ ಅವರ ಮಗನ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನೆಡೆಯಿತು. ಇನ್ನು "ಇದರ ಹಿಂದೆ ಎಷ್ಟು ಜನರ ಕೈವಾಡ ಇದೆ ಎನ್ನುವುದು ನನಗೆ ಗೊತ್ತು ನಾನೇ ಇದನ್ನು ಸಿಬಿಐ ವಹಿಸಲು ಆ ಸಮಯದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿದ್ದೇ ನಾನು, ಸತ್ಯ ವಿಚಾರವನ್ನು ಸೂಕ್ತ ಸಮಯದಲ್ಲಿ ಜನತೆ ಮುಂದೆ ತೆರಿದಿಡಿವೆ "ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು,ಬೆಳ್ತಂಗಡಿಯ ಮಾಜಿ ಶಾಸಕ ಕಾಂಗ್ರೆಸ್ ನ ವಸಂತ್ ಬಂಗೇರ ! ಇವರ ಹೇಳಿಕೆ ಮತ್ತದೇ ಗೊಂದಲವನ್ನು ಏರ್ಪಡಿಸುವುತ್ತಿದೆ, ಇನ್ನು ಈ ಕೇಸ್ ನಲ್ಲಿ ನೇರ ಸಾಕ್ಷಿದಾರರು ಎಂದು ಗುರುತಿಸಿಕೊಂಡಿರುವ ಪರಿಮಳ ಟೀಚರ್ ಹಾಗೂ ವರ್ಷ ಎಂಬ ವಿದ್ಯಾರ್ಥಿನಿ ಹೀಗೆ ಇವೆಲ್ಲವನ್ನೂ ಕೊಲಂಕುಷವಾಗಿ ಪರಿಗಣಿಸಿ, ಇವರೆಲ್ಲರನ್ನು ಸರಿಯಾಗಿ ತನಿಖೆ ಮಾಡಿ ಒಂದು ವಿಶೇಷ ತನಿಖಾದಳವನ್ನು ನಿಯೋಜಿಸಿದರೇ ಸತ್ಯ ಹೊರಹೊರತರುವುದಕ್ಕೆ ಪ್ರಯಾಸವಾಗದು. ಮಹೇಶ್ ಶೆಟ್ಟಿ ತಿಮರೋಡಿ ಈ ಪ್ರತಿಭಟನೆಗೆ ಧುಮುಕಲು ಕಾರಣವೇನು? ಮಹೇಶ್ ಶೆಟ್ಟಿ ತಿಮ್ಮರೊಡಿ ಬೆಳ್ತಂಗಡಿ ಪರಿಸರದಲ್ಲಿ ಚಿರಪರಿಚಿತ ಹೆಸರು, ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಪ್ರಖರವಾಗ್ಮಿ, ಇದ್ದದ್ದನ್ನು ಇದ್ದ ಹಾಗೆ ಭಯಭೀತಿಯನ್ನುಬದಿಗೊತ್ತಿ ನೇರವಾಗಿ ಕಕ್ಕುವ ವ್ಯಕ್ತಿತ್ವ, ತನ್ನ ಗೌರವಕ್ಕೆ ಚ್ಯುತಿ ಬಂದದ್ದರಿಂದ ಹಿಂದೂ ಸಂಘಟನೆಯಿಂದ ಹೊರಗುಳಿದು ಪ್ರಜಾಪ್ರಭುತ್ವ ವೇದಿಕೆಯನ್ನು ಕಟ್ಟಿದ್ದರು., ಅಲ್ಲಲ್ಲಿ ನ್ಯಾಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು, ಅದ್ಹೇಗೋ ಅಚಾನಕ್ಕಾಗಿ ಈ ಪ್ರಕರಣದಲ್ಲಿ ಇಳಿದಿದ್ದರು.,ಸುಖ ಸುಮ್ಮನೆ ನನ್ನ ಮೇಲೆ ಕೇಸು ದಾಖಲು ಗೊಂಡಿದ್ದರಿಂದ ತಾಳ್ಮೆ ಬಿಟ್ಟು ಈ ಹೋರಾಟಕ್ಕೆ ಇಳಿಯಬೇಕಾಯಿತು ಎಂಬ ಮಾತನ್ನು ಸಭೆ ಹೋರಾಟಗಳಲ್ಲಿ ಹೇಳುತ್ತಾ ಬರುತ್ತಿದ್ದಾರೆ.
ಮಹೇಶ್ ಶಟ್ಟಿ ತಿಮ್ಮೋರೋಡಿ ಅವರಿಗೆ ಧರ್ಮಸ್ಥಳ ದೇವಸ್ಥಾನದವರ ಬಗ್ಗೆ ಪೂರ್ವದ್ವೇಷ ಇದ್ದಿರುವುದರಿಂದ ಅದನ್ನು ಸಾಧಿ ಸುವುದಕ್ಕೆ, ತೀರಿಸುವುದಕ್ಕೆ ಈ ಹೋರಾಟವನ್ನು ಅಸ್ತ್ರವಾಗಿ ಬಳಸಿ ಕೊಂಡಿದ್ದಾರೆ., ಈ ಹಿಂದೆ ಅವರಿಗೆ ಎಂ ಎಲ್ ಎ ಸೀಟು ಸಿಗಲಿಲ್ಲ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ ಮುಂದೆ ಬರುವ ಎಂ ಪಿ ಸೀಟು ಪಡೆಯುವ ಸಲುವಾಗಿ ಈ ರೀತಿ ಹೋರಾಟಕ್ಕೆ ಇಳಿದಿದ್ದಾರೆ, ಒಂದೇ ಕೈಯಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಎಂಬ ಮಾತು ಕೂಡಾ ಜನ ಜನಿತವಾಗಿದೆ. ಸೌಜನ್ಯಾಳಿಗೆ ನ್ಯಾಯ ಸಿಗಲಿ! ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಫಲ ಸಿಗಬೇಕಾದರೇ, ಸರ್ಕಾರ ಇದರ ಬಗ್ಗೆ ಗಂಭೀರ ಆಲೋಚನೆ ಮಾಡಿ ಮರು ತನಿಖೆಗೆ ಒಳಪಡಿಸಬೇಕಾಗಿದೆ ಈಗಾಗಲೇ ಸಂತ್ರಸ್ತೆಯ ಕುಟುಂಬಿಕರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಯನ್ನೂ ಕೊಟ್ಟಿದ್ದಾರೆ.ಅವರು ಅದನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ತಿಂಗಳು ಕಳೆಯುತ್ತಾ ಬಂದರೂ,ಇದುವರೆಗೂ ಅದರ ಬಗ್ಗೆ ಏನೂ ಪಾಸಿಟಿವ್ ಸೂಚನೆ ಸಿಕ್ಕಿಲ್ಲ,ಇನ್ನು ಬಿಜೆಪಿಯ ಕರಾವಳಿ ಶಾಸಕರು, ಮಾಜಿ ಸಚಿವ ತ್ರಯರು ಸೂಕ್ತ ನ್ಯಾಯ ಲಭಿಸಲು ಸಭೆ ನಡೆಸಿದ್ದಾರೆ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮನವಿಯನ್ನೂ ನೀಡಿದ್ದಾರೆ.ಆದಷ್ಟು ಬೇಗ ಮರು ತನಿಖೆಯಾಗಲಿ,ಹನ್ನೊಂದು ವರ್ಷಗಳಿಂದ ಗೊಂದಲದ ಗೂಡಾಗಿರುವ ಈ ಘಟನೆಗೆ ಪರಿಹಾರ ಲಭಿಸಲಿ,ಸುಖಾಂತ್ಯ ಕಾಣಲಿ.ದಿನ ನಿತ್ಯ ಹೋರಾಟ,ಪ್ರತಿಭಟನೆ ನಡೆಸಿದರೇ ಏನೂ ಪ್ರಯೋಜನ ಕಾಣದು !ಸಂಕ ಮುರಿದಲ್ಲೆ ಸ್ನಾನ ಅನ್ನುವ ರೀತಿಯಲ್ಲಿ ಕೆಲವೊಂದು ಎಡಬಿಡಂಗಿಗಳು ತಮ್ಮ ದ್ವೇಷಕಾರುವುದಕ್ಕೆ,ವಯಕ್ತಿಕ ಚಟುವಟಿಕೆಗಳಿಗೆ ಈ ಪ್ರಕರಣವನ್ನು ದಾಳವಾಗಿ ರೂಪಿಸಿಕೊಂಡು ಕ್ಷೇತ್ರಕ್ಕೆ ಹಾಗೂ ವ್ಯಕ್ತಿಗಳ ಹೆಸರಿಗೆ ಮಸಿಬಳಿಯುವ ಕೆಲಸ ಮುಂದಾಗದೇ ಇರಲಿ.ಕಾಮಾಂಧುರರ ಕಪಿಮುಷ್ಠಿಯಲ್ಲಿ ಸೋತು ಸತ್ತು ಸ್ವರ್ಗ ಸೇರಿದ ಸೌಜನ್ಯ ಬದುಕಿ ಬರಲಾರಳು,ಹಾಗಂತ ಇದನ್ನು ಅಲ್ಲಿಗೆ ಬಿಟ್ಟು ಕೈ ತೊಳೆದು ಕೊಳ್ಳುವ ಸ್ಥಿತಿ ಕೂಡ ನಿರ್ಮಾಣವಾಗ ಬಾರದು, ಅದೆಷ್ಟೋ ಹೆಣ್ಣು ಮಕ್ಕಳು ಕರಾವಳಿಯಲ್ಲಿ ಇದೆ ತೆರನಾಗಿ ಜೀವತೆತ್ತಿದ್ದಾರೆ ಅವರಗಗಳಿಗೆ ನ್ಯಾಯ ಸಿಗದೇ ಕೇಸು ಮುಚ್ಚಿ ಹೋಗಿದ್ದನ್ನು ನೆನಪಿಸಿಕೊಳ್ಳಬಹುದು., ಇದು ಆ ಸಾಲಿಗೆ ಸೇರದೇ ಇರಲಿ., ಇದೊಂದು ಎಲ್ಲರಿಗೂ ಪಾಠ ವಾಗಲಿ ಮುಂದೆ ಇಂಥ ಕ್ರತ್ಯಗಳು ಸಂಭವಿಸದೇ ಇರುವುದಕ್ಕೆ ಈ ಘಟನೆ ನೆನಪು ತರವಂತೆ ಇರಬೇಕು.ಮುಂದೆಂದೂ ಪಾಪಿ ಕಾಮಿಗಳು ಈ ಬಗ್ಗೆ ಆಲೋಚನೆ ಮಾಡಲೇ ಬಾರದು ಅಂತಹ ನಿಸ್ಪಾಕ್ಷ ತನಿಖೆ ಹಾಗೂ ತಪ್ಪಿತಸ್ಥರಿಗೆ ಉಗ್ರ ಕಠಿಣ ಶಿಕ್ಷೆಆಗಲೇ ಬೇಕು.ದಿಲ್ಲಿಗೊಂದು ನ್ಯಾಯ, ಹಳ್ಳಿಗೊಂದು ನ್ಯಾಯ ಆಗಬಾರದು. ಸೌಜನ್ಯಾಳಿಗೆ ನ್ಯಾಯ ಸಿಗಲಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ