ಸೋಮವಾರ, ಜೂನ್ 15, 2020

ಕರಾಳ ವರ್ಷ ಈ 2020 !


ಹೌದು !ಹಿಂದೆಂದೂ ಕಂಡು ಕೇಳರಿಯದಂತ ಅಹಿತಕರ ಘಟನೆಯನ್ನು ಹೊತ್ತು ತಂದಿದೆ ಈ ವರ್ಷ 2020 ! ಕಣ್ಣಿಗೆ ಮುದ ನೀಡುವಂತಹ ಸಂಖ್ಯೆ 2020., ಅಷ್ಟೇ ಕಣ್ಣೀರು ತರಿಸುತ್ತಿದೆ ದಿನದಿಂದ ದಿನಕ್ಕೆ. ಸಾವು-ನೋವುಗಳನ್ನೂ ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದೆ. ಲೆಕ್ಕ- ಪತ್ರ ಇಲ್ಲದೇ ವೇಗವಾಗಿ ವಿಹರಿಸುತ್ತಿದೆ.,ಇನ್ನೂ ಅರ್ಧ ವರ್ಷ ಕಳೆದಿಲ್ಲ ,ಇಷ್ಟೊಂದು ಪಾಸ್ಟ್ ಆಗಿ ದುಃಖದ ಮಡುವಿನೊಂದಿಗೆ ಕಣ್ಣೀರಿನಲ್ಲಿ ಕೈ ತೊಳೆಯಿಸುತ್ತಿದೆ ಅಂದರೇ, ಇನ್ನುಳಿದ ಅರ್ಧ ವರ್ಷದ ಬಗೆಗೆ ಆಲೋಚಿಸಿದರೇ ನಿದ್ರೆ ಹತ್ತುವುದಿಲ್ಲ ಭಯದ ನಡುವೆ ಬದುಕು ಸಾಗಿಸುವಂತಾಗಿದೆ .ಕರೋನ ಎಂಬ ಮಹಾಮಾರಿ ಕಂಡು ಬಂದದ್ದು ,2019 ರ ಡಿಸೇಂಬರ್ ಕೊನೆ ಭಾಗದಲ್ಲಿಯಾದರೂ ,ಪರಿಣಾಮ ,ಫಲಿತಾಂಶ ಮಾತ್ರ 2020 ನೀಡುತ್ತಿದೆ.ದೇಶದಲ್ಲಿ ಸುಮಾರು 3 ಲಕ್ಷ ಅಧಿಕ ಮಂದಿ ಸೋಂಕಿಗೆ ತುತ್ತಾದರೇ 8500 ಕ್ಕೂ ಅಧಿಕ ಮಂದಿ ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುವಂತಿದೆ . ಇದುವರಿಗಿನ ಅಂಕಿ-ಅಂಶದ ಪ್ರಕಾರ ಮುಂದೆ ಅದೆಷ್ಟೋ ದೇವರಿಗೆ ಗೊತ್ತು . ಅದೆಷ್ಟೋ ಪತಿ ಪತ್ನಿಯನ್ನು ,ಅಮ್ಮ ಮಗನನ್ನು ,ತಂದೆ - ತಾಯಿ ,ಬಂಧು ಬಳಗವನ್ನೂ ಎಲ್ಲಾಕ್ಕಿಂತ ಹೆಚ್ಚಾಗಿ, ಇನ್ನೇನು ಮಗುವನ್ನು ನೋಡುವ ದಿನ ಸಮೀಪಿಸುವಾಗಲೇ ಮುಖವನ್ನು ನೋಡಲು ಸಾಧ್ಯವಾಗದ ಸುದ್ದಿ ನಿಜಕ್ಕೂ ಅರಗಿಸಿಕೊಳ್ಳಲಾಗದು. ಇಂತಹ ದುಃಖ ಭರಿತ ಕೇಸುಗಳಿಗೆ ಲೆಕ್ಕವಿಲ್ಲ ,ಅನೂ ದಿನವೂ ಏರಿಕೆ ಕಾಣುತ್ತಿದೆ . 'ಅಯ್ಯೋ ಪಾಪಾ' ಎಂಬ ಧ್ವನಿಯೊಂದಿಗೆ ಕಣ್ಣೀರು ನಮಗೆ ಅರಿವಿಲ್ಲದಂತೆ ಉದುರದೇ ಇರದು . 'ಇದು ಎಂತ ವರ್ಷವಪ್ಪಾ’ ಎಂದು ಹಿಡಿ ಶಾಪ ಹಾಕುತ್ತಿದ್ದರೇ ,ಮತ್ತದೇ ಪತ್ರಿಕೆ, ಟಿವಿಗಳಲ್ಲಿ ಅದೇ ನ್ಯೂಸ್ !ಇನ್ನೂ ಸೆಲೆಬ್ರಿಟಿಗಳಿಗಂತೂ ಕರಾಳ ವರ್ಷವೇ ಸರಿ. ಎಂದೂ ಕೂಡಾ ಈ ಪರಿಯ, ಈ ಪ್ರಾಯದ ಸಾವು -ನೋವು ಕಂಡ ಉದಾಹರಣೆಗಳಿಲ್ಲ .ಆದರೆ ಈ ವರ್ಷ ಸೆಲೆಬ್ರೆಟಿಗಳ ಬಾಳಲ್ಲಿ ಹೆಸರಂತೆ ಟ್ವೆಂಟಿ -ಟ್ವೆಂಟಿ ಆಡುತ್ತಿದೆ . ಒಟ್ಟಾರೇ ಈ ವರ್ಷ ಅದೆಷ್ಟು ಸೆಲೆಬ್ರಿಟಿಗಳು ದೂರ ಆಗಿದ್ದಾರೆ ,ನೋವು ಅನುಭವಿಸಿದ ,ಆಸ್ಪತ್ರೆ ಕದ ತಟ್ಟಿದವರ ಒಂದು ಪುಟ್ಟ ಪರಿಚಯದ ಪಟ್ಟಿ ಸಂಗಹ್ರಹಿಸಿದ್ದೇನೆ .ಇದರಲ್ಲಿ ಸಿನಿಮಾ ನಟ ,ನಟಿ,ನಿರ್ಮಾಪಕ ,ಸಂಗೀತ ನಿರ್ದೇಶಕ , ಕವಿ -ಸಾಹಿತಿ , ನ್ಯಾಯವಾದಿ,ರಾಜಕೀಯ ಮುಖಂಡರು ಇದ್ದಾರೆ .
ಬಾಲಿವುಡ್ ನಟಿ- ಶಬಾನಾ ಆಜ್ಮಿ :
ಅದು ಜನವರಿ 18 ಶನಿವಾರ ಬಾಲಿವುಡ್ ಹೆಸರಾಂತ ನಟಿ ಶಬಾನಾ ಆಜ್ಮಿ ಕಾರು ಅಪಘಾತವಾಗಿತ್ತು . ಅದೃಷ್ಟವಶಾತ್ ಶಬಾನಾ ಗಾಯಕೊಂಡಿದ್ದು ಬಿಟ್ಟರೇ, ಅಪಾಯದಿಂದ ಪಾರಾಗಿದ್ದರು. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು . ಮುಂಬೈನಿಂದ 60 ಕಿ.ಮೀ. ದೂರದ ಖಲಾಪುರದಲ್ಲಿ ಶಬಾನಾ ಪ್ರಯಾಣಿಸುತ್ತಿದ್ದ ಕಾರು, ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಶಬಾನಾ ಅವರನ್ನು ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಅಜ್ಮಿ 1974ರಲ್ಲಿ ಶ್ಯಾಮ್ ಬೆನೆಗಲ್ ನಿರ್ದೇಶನದ ಅಂಕುರ್ ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಇವರು ,ಸಾಕೆಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ . 69 ವರ್ಷದ ಶಬಾನಾ ಆಜ್ಮಿ ಅವರು ಅತ್ಯುತ್ತಮ ನಟಿಗಾಗಿ ಐದು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 4 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿದ್ದಾರೆ.ಹಾಗೂ 2012ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ-ಅರ್ಜುನ್ ಜನ್ಯ
ಜನಪ್ರೀಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯ ಫೆಬ್ರವರಿ 26ನೇ ತಾರೀಕು ಬುಧವಾರ ರಂದು ಮೈಸೂರಿನ ತಮ್ಮ ನಿವಾಸದಲ್ಲಿರುವಾಗ ಹೃದಯಾಘಾತಕ್ಕೊಳಗಾಗಿದ್ದರು ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸಮೀಪದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದರು. ಅರ್ಜುನ್ ಜನ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು . ‘ಬೆಳಗ್ಗೆ 2.30ಕ್ಕೆ ಅರ್ಜುನ್ ಅವರಿಗೆ ಆಸ್ಪತ್ರೆಯ ತಂಡ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ಇನ್ನು 2 ಗಂಟೆ ತಡವಾಗಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವೂ ಸರಿಯಾಗಿದೆ. ಅರ್ಜುನ್ ಜನ್ಯ ಕ್ಷೇಮವಾಗಿದ್ದಾರೆ' ಎಂದು ವೈದ್ಯರು ಹೇಳಿದ್ದರು.39 ವರ್ಷದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ.ಇತ್ತೀಚೆಗೆ ತೆರೆಕಂಡ ದರ್ಶನ್ ಅಭಿನಯದ 'ಒಡೆಯ' ಸಿನಿಮಾಗೆ ಹಾಗೂ ಇನ್ನೇನು ತೆರೆ ಕಾಣಬೇಕಿರುವ 'ರಾಬರ್ಟ್' ಚಿತ್ರಕ್ಕೆ ಇವರೇ ಸಂಗೀತ ನಿರ್ದೇಶನ ಮಾಡಿದ್ದಾರೆ.
ನಿರ್ಮಾಪಕ -ವಿ ಕೆ ಮೋಹನ್
ಖ್ಯಾತ ನಿರ್ಮಾಪಕ, ಉದ್ಯಮಿ ವಿ ಕೆ ಮೋಹನ್ ಅವರು ಬೆಂಗಳೂರಿನ ಪೀಣ್ಯ ಬಳಿಯಿರುವ ತಮ್ಮದೇ ಹೋಟೆಲ್ ಒಂದರಲ್ಲಿ ಮಾರ್ಚ್ 22 ರಂದು ನೇಣಿಗೆ ಶರಣಾಗಿದ್ದರು .ದಿ| ಡಾ ರಾಜ್‌ ಕುಮಾರ್‌ ಕುಟುಂಬಕ್ಕೆ ಆತ್ಯಾಪ್ತರಾಗಿದ್ದ ಅವರು . ಹಲವು ಸಿನೆಮಾಗಳ ವಿತರಕರಾಗಿ ಹಾಗೂ ನಿರ್ಮಾಪಕರಾಗಿಯೂ ಕೆಲಸ ನಿರ್ವಹಿಸಿದ್ದರು.ವಿ.ಕೆ. ಮೋಹನ್‌ ಅಲಿಯಾಸ್‌ ಕಪಾಲಿ ಮೋಹನ್‌ ಅವರಿಗೆ 62 ವರ್ಷವಾಗಿತ್ತು . ಕುಂದಾಪುರ ಮೂಲದ ವಿ.ಕೆ.ಮೋಹನ್ ವಕ್ವಾಡಿ, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕುಟುಂಬದ ಜತೆ ವಾಸವಿದ್ದ ಅವರು, ಸಿನಿಮಾ ನಿರ್ಮಾಣ, ವಿತರಣೆ, ಫೈನಾನ್ಸ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು.
ನಟಿ - ಶರ್ಮಿಳಾ ಮಾಂಡ್ರೆ
ಅದು ಏಪ್ರಿಲ್ 3 ರಂದು ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಗಳೂರಿನ ವಸಂತ ನಗರ ಬಳಿಯ ರೈಲ್ವೆ ಪೋಲ್ಗೆ ಜಾಗ್ವಾರ್ ಕಾರು ಡಿಕ್ಕಿ ಹೊಡೆಯಿತು . ಕಾರಿನಲ್ಲಿ ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಜೊತೆಗೆ ಆಕೆಯ ಸ್ನೇಹಿತರು ಇದ್ದರು. ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಸಣ್ಣ-ಪುಟ್ಟ ಗಾಯಗಳಾಗಿತ್ತು ಬಿಟ್ಟರೇ ಅಪಾಯದಿಂದ ಪಾರಾಗಿದ್ದರು .2007ರಲ್ಲಿ "ಸಜನಿ" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಕೃಷ್ಣ, ನವಗ್ರಹ, ಹೀಗೆ ಸುಮಾರು 19 ಸಿನೆಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.ಇದಲ್ಲದೆ ಇವರು ಕನ್ನಡ, ತೆಲುಗು, ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಹಾಸ್ಯನಟ- ಬುಲೆಟ್ ಪ್ರಕಾಶ್
ಬುಲೆಟ್ ಪ್ರಕಾಶ್ ಕನ್ನಡದ ಜನಪ್ರಿಯ ಹಾಸ್ಯನಟರ ಪೈಕಿ ಗುರುತಿಸಿಕೊಂಡಿದ್ದ ಬುಲೆಟ್ ಪ್ರಕಾಶ್ ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಏಪ್ರಿಲ್ 6 ರಂದು ಕೊನೆಯುಸಿರೆಳೆದಿದ್ದರು. ಅವರಿಗೆ ಕೇವಲ 44 ವರ್ಷ ವಯಸ್ಸು ಆಗಿತ್ತು . ಕಿಡ್ನಿ ವೈಫಲ್ಯ ಮತ್ತು ಸೋಂಕಿನಿಂದ ಬಳಲುತ್ತಿದ್ದ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದಾಗಿ, ನಗರದ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ರಾಯಲ್ ಎನ್ಫೀಲ್ಡ್ ಬುಲೆಟ್ ಬ೦ಡಿಯನ್ನು ಓಡಿಸುವುದರಿ೦ದ ಇವರಿಗೆ ಈ ಬುಲೆಟ್ ಎ೦ಬ ಹೆಸರು ಸೇರಿಕೊಂಡು ಬುಲೆಟ್ ಪ್ರಕಾಶ್ ಎಂಬುದಾಗಿತ್ತು. 2002ರ ಧ್ರುವ ಚಿತ್ರದಿಂದ ಆರಂಭಗೊಂಡ ಇವರ ಸಿನಿ ಜರ್ನಿ, ಪಾರ್ಥ, ಮಸ್ತ್ ಮಜಾ ಮಾಡಿ, ಐತಲಕಡಿ ಸೇರಿದಂತೆ ರಾಜಸಿಂಹದ ನಂತ್ರ ಮುಂದುವರೆದಿತ್ತು. 2015 ರಲ್ಲಿ, ಪ್ರಕಾಶ್ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದ ಅವರು, ಕನ್ನಡ ಅಷ್ಟೇ ಅಲ್ಲದೇ ಸೌಂತ್ ಇಂಡಿಯನ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್‌ ನಟ -ಇರ್ಫಾನ್‌ ಖಾನ್
ಬಾಲಿವುಡ್‌ ನಟ ಇರ್ಫಾನ್‌ ಖಾನ್ ಏಪ್ರಿಲ್ 29 ರಂದು ಬುಧವಾರ ಮುಂಬೈನಲ್ಲಿ‌ ನಿಧನರಾದರು. 53 ವರ್ಷದ ಇರ್ಫಾನ್,ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್‌ನಿಂದ ಬಳಲಿದ್ದ ಇರ್ಫಾನ್ ಖಾನ್ ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಇರ್ಫಾನ್‌ ತೀವ್ರ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕೆತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು .ಮೊದಲಿಗೆ ಇರ್ಫಾನ್ ಖಾನ್ ಚಾಣಕ್ಯ, ಬನೇಗಿ ಅಪ್ನಿ ಬಾತ್, ಭಾರತ್ ಏಕ್ ಕೋಜ್ ಮತ್ತು ಚಂದ್ರಕಾಂತ್ ಟಿವಿ ಶೋಗಳಲ್ಲಿ ಕಾಣಿಸಿಕೊಂಡರು. ನಂತರ ಸಿನಿಮಾ ಕ್ಷೇತ್ರದತ್ತ ಮುಖ ಮಾಡಿದರು. ಲೈಫ್ ಇನ್ ಎ ಮೆಟ್ರೋ, ಪಾನ್ ಸಿಂಗ್ ತೋಮರ್, ಲೈಫ್ ಆಫ್ ಪೈ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಗ್ರೇಜಿ ಮೀಡಿಯಂ ಅವರ ಕೊನೆಯ ಸಿನಿಮಾ.
ಬಾಲಿವುಡ್ ನಟ -ರಿಷಿ ಕಪೂರ್
ಇರ್ಫಾನ್ ಖಾನ್ ನನ್ನ ಕಳೆದು ಕೊಂಡು ಕಣ್ಣೀರು ಇಡುತ್ತಿದ್ದ ಬಾಲಿವುಡ್ ಗೆ ಕೇವಲ ದಿನದಾದ ಅಂತರದಲ್ಲಿ ಇನ್ನೊಂದು ಆಘಾತ ಬರಸಿಡಿಲಿನಂತೆ ಬಂದು ಒದಗಿತ್ತು . ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು.67 ವರ್ಷದ ರಿಷಿಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕುಟುಂಬದ ಕಾರ್ಯಕ್ರಮ ನಿಮಿತ್ತ ದಿಲ್ಲಿಗೆ ಹೋದಾಗ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ ತಮಗೆ ಇನ್ಫೆಕ್ಷನ್ ಆಗಿತ್ತು ಎಂದು ತಿಳಿಸಿದ್ದರು. ಮುಂಬೈಗೆ ಮರಳಿದ ಬಳಿಕ ವೈರಲ್ ಜ್ವರದ ಕಾರಣ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿ ಬಹಳ ಬೇಗ ಬಿಡುಗಡೆಯಾಗಿದ್ದರು.ತಂದೆ ರಾಜ್‌ ಕಪೂರ್ ಅವರ 'ಮೇರಾ ನಾಮ್ ಜೋಕರ್' ಚಿತ್ರದಲ್ಲಿನ ಬಾಲನಟನೆಗಾಗಿ ರಿಷಿ ಕಪೂರ್ 1970ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಡಿಂಪಲ್ ಕಪಾಡಿಯಾ ಜೊತೆಗೆ ಲೀಡ್ ಆಗಿ 'ಬಾಬಿ' ಚಿತ್ರದಲ್ಲಿ ಕಾಣಿಸಿಕೊಂಡ ರಿಷಿಗೆ 1974ರಲ್ಲಿ ಉತ್ತಮ ನಟ ವಿಭಾಗದಲ್ಲಿ ಫಿಲ್ಮ್‌ಫೇರ್ ಅವಾರ್ಡ್ ಸಿಕ್ಕಿತ್ತು. 1973ರಿಂದ 2000ರವರೆಗೆ 92 ಸಿನಿಮಾಗಳಲ್ಲಿ ಲೀಡ್ ಆಗಿ ಕಾಣಿಸಿಕೊಂಡ ರಿಷಿ ಕಪೂರ್ ,ಅವುಗಳಲ್ಲಿ 32 ಹಿಟ್ ಸಿನಿಮಾ ನೀಡಿದ್ದರು. 'ದೊ ದೋನಿ ಚಾರ್', 'ಕಪೂರ್ & ಸನ್ಸ್' ಸಿನಿಮಾಗಳಿಗೆ ಫಿಲ್ಮ್‌ಫೇರ್ ಅವಾರ್ಡ್ ಪಡೆದಿದ್ದರು. ಇವರ ಪತ್ನಿ ನೀತು ಸಿಂಗ್ ಜೊತೆಗೆ 12 ಸಿನಿಮಾಗಳಲ್ಲಿ ನಟಿಸಿದ್ದರು.ಇವರನ್ನು ಕಳೆದು ಕೊಂಡ ಬಾಲಿವುಡ್ ಬಡವಾಗಿದೆ .
ಖ್ಯಾತ ಕವಿ- ಕೆ.ಎಸ್‌ ನಿಸಾರ್ ಅಹಮ್ಮದ್
ಖ್ಯಾತ ಕವಿ ಹಾಗೂ ಬರಹಗಾರ ಕೆ.ಎಸ್‌ ನಿಸಾರ್ ಅಹಮ್ಮದ್ ಮೇ 3 ರಂದು,ಭಾನುವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು . ನಿತ್ಯೋತ್ಸವ ಕವಿ ಎಂದೇ ಪ್ರಸಿದ್ದಗಳಿಸಿದ್ದ ನಿಸಾರ್ ಅಹಮ್ಮದ್ ಅತ್ಯುತ್ತಮ ಸಾಹಿತ್ಯ ಸಂಕಲನಗಳನ್ನು ಕನ್ನಡಕ್ಕೆ ನೀಡಿದರು. ಇತ್ತೀಚೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಭಾನುವಾರ ಪದ್ಮನಾಭನಗರದಲ್ಲಿರುವ ತಮ್ಮ ಸ್ವಗೃಹದಲ್ಲಿದ್ದ ಅವರು ಕೊನೆಯುಸಿರೆಳೆದಿದ್ದಾರೆ.ಕಳೆದ 15 ದಿನಗಳ ಹಿಂದಷ್ಟೇ ಅಮೆರಿಕದಲ್ಲಿದ್ದ ಅವರ ಪುತ್ರ ಕೂಡ ನಿಧನರಾಗಿದ್ದು, ಮಾನಸಿಕವಾಗಿ ಅವರು ತೀವ್ರ ಆಘಾತಕ್ಕೊಳಗಾಗಿದ್ದರು.ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ 5,1936ರಲ್ಲಿ ಜನಿಸಿದರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು.ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ 10ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (2018) 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ,ಮಾಸ್ತಿ ಪ್ರಶಸ್ತಿ ,ಪಂಪ ಪ್ರಶಸ್ತಿ,ಗೊರೋರು ಪ್ರಶಸ್ತಿಗಳು ದೊರೆತಿವೆ. ಇಷ್ಟೇ ಅಲ್ಲದೇ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಇವರನ್ನೂ ಕೂಡಾ ಈ 2020 ಬಿಡಲೇ ಇಲ್ಲ
ಹಾಸ್ಯನಟ -ಮೈಕಲ್ ಮಧು
ಏಪ್ರಿಲ್ ಮುಗಿದು ಮೇ ತಿಂಗಳು ಆರಂಭವಾಗುತ್ತಿದ್ದಂತೆ ಇತ್ತ ಕನ್ನಡದ ಹಿರಿಯ ಹಾಸ್ಯನಟ ಮೈಕಲ್ ಮಧು ನಮ್ಮನ್ನು ಅಗಲಿದರು . ಅವರಿಗೆ 55 ವರ್ಷ ವಯಸ್ಸು ಆಗಿತ್ತು . ಮನೆಯಲ್ಲಿ ಕುಸಿದು ಬಿದ್ದ ನಟನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ,ಮೇ 13 ರಂದು ಬುಧವಾರ ಬೆಂಗಳೂರಿನ ಕೆ.ಆರ್‌ ಆಸ್ಪತ್ರೆಯಲ್ಲಿ ನಿಧನರಾದರು .ಕಳೆದ ಎರಡೂವರೆ ದಶಕಗಳಿಂದ ಕನ್ನಡದ ಸುಮಾರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೈಕಲ್‌ ಮಧು ವಿವಿಧ ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.ಮೈಕಲ್ ಮಧು ಅವರು ಓಂ, ಲವ್ ಟ್ರೇನಿಂಗ್ ಸ್ಕೂಲ್, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಪಾಪಿಗಳ ಲೋಕದಲ್ಲಿ, ಎಕೆ 47, ಎ, ಮಿನುಗು ತಾರೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕಾಶಿನಾಥ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮೈಕಲ್ ಮಧು,ಕೇವಲ ನಟ ಮಾತ್ರವಲ್ಲದೇ ,ನ್ರತ್ಯ ಸಂಯೋಜಕರು ಕೂಡಾ ಆಗಿದ್ದರು ಆದುದ್ದರಿಂದಲೇ ಅವರಿಗೆ ಮೈಕಲ್ ಎಂಬ ಹೆಸರು ಅಂಟಿ ಕೊಂಡಿತ್ತು.
ನಟಿ-ಮೆಬಿನಾ ಮೈಕಲ್
ಚಿತ್ರರಂಗಕ್ಕೆ ಇದೀಗ ಪಾದಾರ್ಪಣೆ ಮಾಡಿದ್ದ ಕೊಡಗಿನ ಯುವ ಪ್ರತಿಭೆ ನಮ್ಮನ್ನು ಬಿಟ್ಟು ಅಗಲಿದರು . ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸೀಸನ್ 4 ವಿನ್ನರ್ ಮೆಬಿನಾ ಮೈಕಲ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಮೇ 26 ಮಂಗಳವಾರ ದಂದು ಸಂಜೆ ಮೃತಪಟ್ಟಿರು .ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟೀಯ ಹೆದ್ದಾರಿ 75ರಲ್ಲಿ ಸಂಜೆ ಸುಮಾರು 4.30ರ ಸಮಯದಲ್ಲಿ ಅಪಘಾತ ಸಂಭವಿಸಿತ್ತು . ಟ್ರಾಕ್ಟರ್-ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು ಬೆಂಗಳೂರಿನಿಂದ ಸೋಮವಾರಪೇಟೆಗೆ ತಮ್ಮ ನಿವಾಸಕ್ಕೆ ಕಾರಿನಲ್ಲಿ ಮೇಬಿನಾ ಮೂವರ ಜೊತೆ ತೆರಳುತ್ತಿದ್ದರು. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಮೆಬಿನಾ, ಪ್ರತಿಯೊಂದು ಟಾಸ್ಕನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದರು. ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ದಾಟಿದ್ದ ಆಕೆ ವಿಜೇತೆಯಾಗಿದ್ದರು. ರಿಯಾಲಿಟಿ ಶೋ ಬಳಿಕ ಮಾಡೆಲಿಂಗ್ನತ್ತ ಮುಖ ಮಾಡಿದ್ದ ಮೆಬಿನಾ ಅಲ್ಲೂ ಕೂಡಾ ಯಶಸ್ಸು ಗಳಿಸಿದ್ದರು.ತಮಿಳು ಚಿತ್ರ ಒಂದರಲ್ಲಿ ನಟಿಸುತ್ತಿದ್ದರು ,ಕನ್ನಡಲ್ಲೂ ಎರಡು ಸಿನಿಮಾಗಳಿಗೆ ಅವಕಾಶ ಪಡೆದಿದ್ದರು .
ನಟಿ- ಚಂದನಾ
ಇತ್ತ ನಗರದ ತಾವರೆಕೆರೆಯಲ್ಲಿ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆಯಿತು ತಾವರೆಕೆರೆಯ ಕೃಷ್ಣಮೂರ್ತಿ ಲೇಔಟಿನ ನಿವಾಸಿ ಚಂದನಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು .ವಿಷ ಸೇವಿಸಿದ್ದ ಚಂದನಾರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆ.29 ವರ್ಷದ ಚಂದನಾ ,ಕನ್ನಡ ಕಿರುತೆರೆ, ಜಾಹೀರಾತು, ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಮೇ 30 ರಂದು ವಿಷ ಸೇವನೆಯ ಸೆಲ್ಫಿ ವಿಡಿಯೋ ಮಾಡಿರುವ ಚಂದನಾ ಅವರು ತಮ್ಮ ಪ್ರಿಯಕರ ದಿನೇಶ್ ಎಂಬುವರ ಮೇಲೆ ಆರೋಪ ಮಾಡಿದ್ದಾರೆ.ತಾವರಕೆರೆ ಮುಖ್ಯರಸ್ತೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿರುವ ಮನೆಯಲ್ಲಿ ವಾಸವಿದ್ದ ಚಂದನಾ, ಲೈವ್ ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು.
ಸಂಗೀತ ನಿರ್ದೇಶಕ- ವಾಜಿದ್ ಖಾನ್
ಜೂನ್ ಮೊದಲ ದಿನವೇ ಬಾಲಿವುಡ್ಗೆ ಮತ್ತೊಂದು ಆಘಾತಕಾರಿ ಸುದ್ದಿ ಕಾದಿತ್ತು. ದಬಂಗ್ ಖ್ಯಾತಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ಕಿಡ್ನಿ ವೈಫಲ್ಯದಿಂದ 42ನೇ ವಯಸ್ಸಿನಲ್ಲೇ ಕೊನೆಯುಸಿರೆಳೆದರು. ವಾಜಿದ್ ಖಾನ್. ಸಾಜಿದ್ – ವಾಜಿದ್ ಜೋಡಿ ಅಂತಲೇ ಬಾಲಿವುಡ್ನಲ್ಲಿ ಹೆಸರು ಮಾಡಿದ್ದ ಸಹೋದರರು. 1998ರಲ್ಲಿ ಸಲ್ಮಾನ್ ಖಾನ್ ಅವರ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಿಂದ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಈ ಜೋಡಿ ಮತ್ತೆ ಹಿಂದಿರುಗಿ ನೋಡಿರಲಿಲ್ಲ. ಆ ಬಳಿಕ 22 ವರ್ಷಗಳ ಸಂಗೀತಪಯಣದಲ್ಲಿ 50ಕ್ಕೂ ಹೆಚ್ಚು ಹಿಟ್, ಸೂಪರ್ಹಿಟ್ ಸಿನಿಮಾಗಳಿಗೆ ಹಲವು ಚಾರ್ಟ್ಬಸ್ಟರ್ ಸಂಗೀತ ನೀಡಿದ್ದರು. ಅದರಲ್ಲೂ ಸಲ್ಮಾನ್ ಖಾನ್ರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರಾಗಿದ್ದ ಈ ಜೋಡಿ, ‘ದಬಾಂಗ್’, ‘ಹಲೋ’, ‘ವೀರ್’, ‘ಪಾರ್ಟನರ್’, ‘ವಾಂಟೆಡ್’ , ‘ಏಕ್ ಥಾ ಟೈಗರ್’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದರು. ಅವರು ಸಂಗೀತ ನೀಡಿದ ಕೊನೆಯ ಸಿನಿಮಾ ಕೂಡ ಸಲ್ಮಾನ್ ಖಾನ್ ನಾಯಕರಾಗಿದ್ದ ‘ದಬಾಂಗ್ 3’.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್ ಖಾನ್, ಅವರನ್ನು ಕೆಲ ದಿನಗಳ ಹಿಂದೆ ಚೆಂಬೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಮಸ್ಯೆ ಉಲ್ಬಣಗೊಂಡ ಪರಿಣಾಮ ನಾಲ್ಕು ದಿನಗಳಿಂದ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಮವಾರ ಬೆಳಗಿನ ಜಾವ ಅವರು ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾಗಿದ್ದಾರೆ. ಲಾಕ್ಡೌನ್ ಮುಗಿದು ಇನ್ನೇನು ಚಿತ್ರೀಕರಣ ಪ್ರಾರಂಭವಾಗುತ್ತೆ ಅಂತ ಎದುರು ನೋಡುತ್ತಿದ್ದ ಬಾಲಿವುಡ್ ಮಂದಿ ಮತ್ತೆ ಕಣ್ಣೀರಾಗಿದ್ದಾರೆ.
ನಟ -ಚಿರಂಜೀವಿ ಸರ್ಜಾ
ಅದು ಭಾನುವಾರ ಜೂನ್ 7 ರಂದು ಮಧ್ಯಾಹ್ನ ಯುವ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿಯನ್ನು ಕೇಳಿ ಇಡೀ ಸ್ಯಾಂಡಲ್ವುಡ್ನ್ನು ಅಕ್ಷರಶಃ ಬೆಚ್ಚಿ ಬೀಳಿಸಿತ್ತು. ಇನ್ನೇನು ಚಿತ್ರರಂಗದಲ್ಲಿ ಹೊಸ ಸಾಧನೆ ಮಾಡಲು ಹೊರಟ್ಟಿದ್ದ ಚಿರು 39ನೇ ವಯಸ್ಸಿನಲ್ಲೇ ತಮ್ಮೆಲ್ಲಾ ಕನಸುಗಳನ್ನು ಬಿಟ್ಟು ಗುಡ್ ಬೈ ಹೇಳಿದ್ದರು. ಮದ್ಯಾಹ್ನ 2 ಗಂಟೆಗೆ ಸುಮಾರಿಗೆ ಕುಟುಂಬದೊಟ್ಟಿಗೆ ಊಟ ಮಾಡುತ್ತಿರುವಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಚಿರಂಜೀವಿ ಸರ್ಜಾ ಅವರನ್ನು ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ, ಆಸ್ಪತ್ರೆಗೆ ಕರೆತಂದು ಕೆಲವೇ ನಿಮಿಷದಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. 2018ರಲ್ಲಿ ವಿವಾಹವಾಗಿದ್ದರು. ಇದಾದ ಎರಡೇ ವರ್ಷದಲ್ಲಿ ಅವರು ಮೃತಪಟ್ಟಿದ್ದಾರೆ.ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದ್ದಾರೆ. 2009ರಲ್ಲಿ ತೆರೆಕಂಡ ವಾಯುಪುತ್ರ ಸಿನಿಮಾ ಮೂಲಕ ಚಿರಂಜೀವಿ ಸರ್ಜಾ ಬಣ್ಣದ ಬದುಕಿಗೆ ಕಾಲಿಟ್ಟಿದ್ದರು. ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ ಸುಮಾರು 22 ಸಿನಿಮಾಗಳಲ್ಲಿ ನಟಿಸಿದ್ದರು.1980 ರಂದು ಆಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಕಲಾವಿದರ ಕುಟುಂಬದಲ್ಲಿ ಜನಿಸಿದ್ದ ಚಿರಂಜೀವಿ ಸರ್ಜಾ, ವಾಯು ಪುತ್ರ ಚಿತ್ರದ ಮ‌ೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದರು. ಚಿಕ್ಕ ವಯಸ್ಸಿನಲ್ಲಿ ಚಿರಂಜೀವಿ ಸರ್ಜಾ ನಿಧನರಾಗಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ನಿರ್ಮಾಪಕ- ಅನಿಲ್ ಸೂರಿ
ಜೂನ್ 3 ಬುಧವಾರ ದಂದು ಇನ್ನೊಂದು ಸ್ಯಾಡ್ ನ್ಯೂಸ್ ಬಂದಿತ್ತು . ಕೊರೋನಾ ಸೋಂಕಿಗೆ ಬಾಲಿವುಡ್ ನ ಹಿರಿಯ ನಿರ್ಮಾಪಕ ಅನಿಲ್ ಸೂರಿ ಸಾವನ್ನಪ್ಪಿದ್ದರು ಎಂದು .ಅವರಿಗೆ 77 ವರ್ಷ ವಯಸ್ಸಾಗಿತ್ತು . ಅನಿಲ್ ಸೂರಿ ಅವರಿಗೆ ಕಳೆದ ಜೂನ್ 2ರಂದು ಜ್ವರ ಕಾಣಿಸಿಕೊಂಡಿತು. ಮರು ದಿನ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮುಂಬೈನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಅಂತೆ . ವೈದ್ಯಕೀಯ ತಪಾಸಣೆಯ ವೇಳೆ ಅವರಿಗೆ ಕೊರೊನಾ ತಗುಲಿರುವುದು ಪತ್ತೆಯಾಯಿತು. ಆದರೆ ಸಂಜೆ 7 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ‌ ಅವರು‌ ಸಾವನ್ನಪ್ಪಿದ್ದರು ಎಂದು ತಿಳಿದು ‌ಬಂದಿದೆ. ಅನಿಲ್‌ ಸೂರಿ ಅವರು ಕರ್ಮಯೋಗಿ, ರಾಜ್ ತಿಲಕ್ ನಂತಹ ಹೆಸರಾಂತ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ರಾಜಕೀಯ ಮುಖಂಡ -ಆಸ್ಕರ್ ಫೆರ್ನಾಂಡಿಸ್
ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಜೂನ್ 10 ರಂದು ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 79 ವರ್ಷ ಪ್ರಾಯದ ಆಸ್ಕರ್ ಫರ್ನಾಂಡಿಸ್ ಅವರು ಎದೆ ನೋವು ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ನಗರದ ಕೊಡಿಯಾಲಬೈಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗುತ್ತಿದೆ.ಹಿರಿಯ ಕಾಂಗ್ರೆಸ್ ಮುಖಂಡ ಎದೆ ನೋವು ಮತ್ತು ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರೂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಉಡುಪಿ ಮೂಲದವರಾದ ಆಸ್ಕರ್ ಫರ್ನಾಂಡಿಸ್ ಅವರು ಉಡುಪಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.ಅವರು ಆದಷ್ಟು ಬೇಗ ಚೇತರಿಕೆ ಕಂಡು ತಮ್ಮ ನಿವಾಸಕ್ಕೆ ಬರಲಿ ಎಂದು ಆಶಿಸೋಣ
ನ್ಯಾಯವಾದಿ- ಎಂ.ಸಿ.ನರಸಿಂಹನ್
ಹೈಕೋರ್ಟ್ ನ ಪ್ರಸಿದ್ಧ ಕಾರ್ಮಿಕ ನ್ಯಾಯವಾದಿ, ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಮಾಜಿ ಶಾಸಕ ಎಂ.ಸಿ.ನರಸಿಂಹನ್ ಜೂನ್ 10 ರಂದು ಬುಧವಾರ ಸಂಜೆ 5 ಗಂಟೆಗೆ ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು . ಅವರಿಗೆ 98 ವರ್ಷ ವಯಸ್ಸು ಆಗಿತ್ತು ಹೈಕೋರ್ಟ್ ನ ಹಿರಿಯ ವಕೀಲರೂ ಮಾಜಿ ಶಾಸಕರು ಹಾಗೂ ಎಐಟಿಯುಸಿ ರಾಜ್ಯ ಸಮಿತಿ ಪೋಷಕರಾಗಿದ್ದ.ನರಸಿಂಹನ್ ಅವರು ಕಾರ್ಮಿಕ ವಿವಾದಗಳ ಬಗೆಗಿನ ಪ್ರಕರಣಗಳ ವಾದ ಮಂಡನೆಯಲ್ಲಿ ಹೆಸರಾಂತ ವಕೀಲರಾಗಿದ್ದರು.ರಾಜ್ಯದ ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡರು ಮತ್ತು ಕಾರ್ಮಿಕ ನಾಯಕರೂ ಆಗಿದ್ದ ನರಸಿಂಹನ್ ಅವರು 1957ರಿಂದ 1962ರವರೆಗೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಂತೆಯೇ, 1962ರಿಂದ 1967ರವರೆಗೆ ವಿಧಾನ ಸಭೆಯಿಂದ ಪರಿಷತ್ ಗೆ ಆಯ್ಕೆಯಾಗಿದ್ದರು.ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಸೇರಿದಂತೆ ದುಡಿಯುವ ವರ್ಗದ ಜನರ ಕಲ್ಯಾಣಕ್ಕೆ ಉಪಯೋಗವಾಗುವಂತಹ ಹಲವು ಕಾನೂನುಗಳು ರೂಪುಗೊಳ್ಳಲು ನರಸಿಂಹನ್ ಕಾರಣರಾಗಿದ್ದರು. 1957ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಕೆಜಿಎಫ್ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಚುನಾಯಿತರಾದರು. 1962ರ ಚೀನಾ ಮಹಾಯುದ್ಧದ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಅವರು 1962ರಿಂದ 1967ರವರೆಗೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.ಶಾಸನ ಸಭೆಗಳಲ್ಲಿ ದುಡಿಯುವ ಜನರ ಧ್ವನಿಯಾಗಿದ್ದ ಅವರು ರೈತ-ಕಾರ್ಮಿಕರ ಹಿತಾಸಕ್ತಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿದ್ದರು. .ಕಾರ್ಮಿಕರ ಧ್ವನಿ ಕ್ಷೀಣವಾಗಿರುವ ಇಂದಿನ ದಿನಗಳಲ್ಲಿ ಎಂ.ಸಿ.ಎನ್ ಅವರಂತಹ ಕಾರ್ಮಿಕ ವರ್ಗದ ಪಕ್ಷಪಾತಿಯ ನಿಧನದಿಂದ ಕಾರ್ಮಿಕ ವರ್ಗ ಇನ್ನಷ್ಟು ಬಡವಾಗಿದೆ.
ಬಾಲಿವುಡ್- ನಟ ಸುಶಾಂತ್ ಸಿಂಗ್ ರಜಪೂತ್
ಪ್ರಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರ ಶುಕ್ರವಾರ ದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿಂದು ಆತ್ಮಹತ್ಯೆ ಮಾಡಿಕೊಂಡಿದ್ದರು. 34 ವರ್ಷದ ಸುಶಾಂತ್ ಈ ಕೃತ್ಯ ಮಧ್ಯಾಹ್ನ 1.30ರ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು ,'ಪವಿತ್ರ ರಿಶ್ತಾ' ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. '' ಕಾಯ್ ಪೋ ಚೇ' ಸಿನಿಮಾ ಮೂಲಕ ಮೊದಲ ಬಾರಿಗೆ ಬಾಲಿವುಡ್ ಪ್ರವೇಶಿಸಿದ್ದ ಸುಶಾಂತ್ ಸಿಂಗ್, 11 ಚಿತ್ರಗಳಲ್ಲಿ ನಟಿಸಿದ್ದು, ಫಿಲಂ ಫೇರ್ ಪ್ರಶಸ್ತಿಗೂ ಭಾಜನರಾಗಿದ್ದರು.ಅವರು ನಟಿಸಿದ್ದ 'ಶುದ್ಧ್ ದೇಶಿ ರೊಮ್ಯಾನ್ಸ್' ಸಿನಿಮಾದ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಚಿತ್ರ ಸುಶಾಂತ್ ಸಿಂಗ್ ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು.'ಕಿಸ್ ದೇಸ್ ಮೇ ಮೇರಾ ದಿಲ್' ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ಸುಶಾಂತ್‍ಗೆ 'ಪವಿತ್ರ ರಿಶ್ತೆ' ಧಾರಾವಾಹಿ ಟೆಲಿವಿಷನ್ ಸ್ಟಾರ್ ವ್ಯಾಲ್ಯೂ ನೀಡಿತ್ತು.ಇವರ ಪ್ರತಿಭೆ ಮತ್ತು ಸಾಮರ್ಥ್ಯ ಗುರುತಿಸಿದ ಬಾಲಿವುಡ್ ಇವರನ್ನು ಕೈ ಬೀಸಿ ಕರೆಯಿತು. 'ಡಿಟೆಕ್ಟಿವ್ ಬ್ಯೂಮ್ ಕೇಶ್ ಭಕ್ಷಿ' ,' ರಭಟಾ', 'ಸಂಚಾರಿಯಾ', 'ಚಿಚ್ಚೋರೆ ಮೊದಲಾದ ಹಲವು ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ನಟಿಸಿ ಮನೋಜ್ಞ ಅಭಿನಯದ ಮೂಲಕ ರಂಜಿಸಿದ ಸುರದ್ರೂಪಿ ನಟ ರಜಪುತ್ ಚಿತ್ರ ರಸಿಕರನ್ನು ತಮ್ಮ ಅಗಾಧ ಪ್ರತಿಭೆಯಿಂದ ರಂಜಿಸಿದರು.ಇಂದು ಅತ್ಯುತ್ತಮ ಟೆಲಿವಿಷನ್ ನಟ , ಸ್ಕ್ರೀನ್ ಪ್ರಶಸ್ತಿ, ಜೀ ಅವಾಡ್ರ್ಸ್, ಮೆಲ್ಬೋರ್ನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಸುಶಾಂತ್ ,ನಟನೆ ಅಲ್ಲದೆ ಅದ್ಭುತ ನೃತ್ಯ ಪಟುವೂ ಆಗಿದ್ದರು. ಅವರದೇ ಆದ ನವೋದ್ಯಮವನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು.
ಇದು ಸಾವು ನೋವು ಅನುಭವಿಸಿದ ಸೆಲೆಬ್ರಿಟಿಗಳ ಸಣ್ಣ ನೋಟವಾಗಿದೆ, ನಾವುಗಳು ದಿನನಿತ್ಯ ಇವರ ಬಗ್ಗೆ ಕಂಡು ಕೇಳಿ ತಿಳಿದು ಕೊಂಡಿದ್ದೇವೆ.ಸಾಕಷ್ಟು ಇವರುಗಳ ಸಿನಿಮಾಗಳನ್ನು ನೋಡಿದ್ದೇವೆ .ಅವರುಗಳು ಹೇಗೋ ನಮಗೆ ಅತೀ ಆಪ್ತರೆನ್ನಿಸಿ ಬಿಡುತ್ತಾರೆ. ಏನೇ ಇರಲಿ ಸಾವಿನ ದವಡೆಯನ್ನು ಸ್ಪರ್ಶಿಸಿ ಬಂದವರು,ಅತೀ ಚಿಕ್ಕ ಪ್ರಾಯದಲ್ಲೇ ಇಹಲೋಕ ತ್ಯಜಿಸಿದವರನ್ನು ಕಂಡರೆ ನಿಜಕ್ಕೂ ದುಃಖವಾಗುತ್ತದೆ,ಆವರೆಲ್ಲರಿಗೂ ಶಾಂತಿ ದೊರಕಲಿ ಇನ್ನು ಉಳಿದಿರುವ 2020 ಅರ್ಧ ವರ್ಷದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂಬ ಆಶಯ ನಮ್ಮೆಲ್ಲರದ್ದು ಆಗಿರಲಿ .





.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ