ಕೋಮು ಸಾಮರಸ್ಯಕ್ಕೆ ಮತ್ತೆರೆಡು ಜೀವಗಳು ಬಲಿಯಾಗಿವೆ . ಸೆರಗಿನಲ್ಲಿ ಕೆಂಡ ಕಟ್ಟಿ ಕೊಂಡಂತೆ ಇದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಬೆಂಕಿ ಹೊತ್ತಿ ಉರಿದಿದೆ ,
ಅಮಾಯಕರಿಬ್ಬರು ಬೀದಿ ಬದಿ ಹೆಣವಾಗಿದ್ದಾರೆ .ಎಂದಿನಂತೆ ರಾಜಕೀಯದ ಹಾರಾಟ ಮುಂದುವರಿದಿದೆ .ರಾಜ ಕಾರಣಿಗಳಿಗೆ ಹಬ್ಬದೂಟವಾದರೇ,ಇದನ್ನೇ ಕಾದ ಕುಳಿತ ಮತಾಂದ ಮತೀಯರಿಗೆ ಸಾಧನೆಯ ಸಂತೋಷ ..! ಒಟ್ಟಾರೆ ಅಕ್ಷರಸ: ಬುದ್ದಿವಂತರ ನಾಡು ಜಗತ್ತಿನಾದ್ಯಂತ ಮತ್ತೆ ಸುದ್ದಿಗೆ ಗ್ರಾಸವಾಗಿದೆ.ಇನ್ನೆಷ್ಟು ಬಲಿ ಬೇಕು? ಅಮಾಯಕರಗಳ ಸಾವಿನ ನಿರೀಕ್ಷೆಯಲ್ಲಿ ಕುಡ್ಲ ಕಣ್ಣು ಬಿಟ್ಟು ಕಾತರಿಸುವುತ್ತಿರುವುದೂ ಸುಳ್ಳಲ್ಲ .
ಇವತ್ತಿನವರೆಗೆ ಈ ಎಲ್ಲಾ ಘಟನೆಗಳನ್ನು ಮೆಲುಕು ಹಾಕಿದರೇ ನಮಗೆ ಸಿಗುವ ಫಲಿತಾಂಶ ಕೇವಲ ಅಮಾಯಕರುಗಳದ್ದೇ ಸಾವು ನೋವುಗಳು .ಫಟಿಂಗರು ಬಚಾವ್ ಆಗುತ್ತಾರೆ ಅಮಾಯಕರು ಮಾತ್ರ ಬಲಿಪಶುಗಳಾಗುತ್ತಿದ್ದಾರೆ .
ಬಾಲ್ಯದಲ್ಲೇ ತನ್ನ ತಂದೆಯನ್ನು ಕಳೆದುಕೊಂಡು ,ಅಕ್ಕರೆಯ ತಾಯಿ ವಿಕಲ ಚೇತನ ಸಹೋದರನೊಂದಿಗೆ ಕುಟುಂಬದ ಪೂರ್ಣ ಹೊರೆಯನ್ನು ಹೊತ್ತ ದೀಪಕ್ ಖುಷಿ ಖುಷಿಯಾಗಿ ಬದುಕಿನ ಪಯಣವನ್ನು ನೆಮ್ಮದಿ ಯಿಂದ ಮುಂದುವರಿಸುತ್ತಾ ಇದ್ದ . ಆದಾಗಲೇ ಕಷ್ಟಪಟ್ಟು ಇಷ್ಟಪಟ್ಟು ಸಾಲ -ಸೂಲ ಮಾಡಿ ಹಣ ಹೊಂದಿಸಿ ಹೊಸ ಮನೆಯನ್ನೂ ಕಟ್ಟಿದ್ದ, ದುಶ್ಚಟಗಳಿಂದ ದೂರ ವಿದ್ದ ದೀಪು ಕುಟುಂಬದ ಆಧಾರ ಸ್ತಂಬವಾಗಿದ್ದ . ಈಗ ದೀಪಕ್ ಕಾಣದ ಲೋಕಕ್ಕೆ ಪಯಣ ಬೆಳೆಸಿದ್ದಾನೆ . ತಾಯಿ ತಮ್ಮನಿಗೆ ಮುಂದಿನ ದಿಕ್ಕು ಯಾರೆಂಬುದನ್ನು ಊಹಿಸಿದರೆ ಕರಳು ಹಿಂಡಿ ಬರುತ್ತದೆ, ತಾನು ಆಯ್ತು ತನ್ನ ಕೆಲಸ ವಾಯಿತು ಎಂಬಷ್ಟೇ ಗುಣ ನಡತೆಯಲ್ಲಿ ಅಳವಡಿಸಿಕೊಂಡಿದ್ದ ಅನ್ನುವುದಕ್ಕೆ ,ಸುಮಾರು 7 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಆತನ ಮಾಲಿಕನೇ ಸಾಕ್ಷಿ .ಕಣ್ಣು ಮುಂದೆ ಇನ್ನಿಲ್ಲವಾದ ದೀಪಕನ್ನು ಕಂಡು ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುವ ಪರಿ ನೋಡಿದರೆ ಸುಲಭವಾಗಿ ಅರ್ಥೈಸಬಹುದು ದೀಪಕ್ ಹೇಗೆ ಇದ್ದ ಎಂದು .ಸ್ನೇಹಿತರ ಸಂಘ ದಿಂದಲೇ ದೂರ ಉಳಿಯುತ್ತಿದ್ದ ,ಎಷ್ಟು ಬೇಕು ಅಷ್ಟೇ ಪರಿಧಿಯಲ್ಲಿ ಅವನ ದಿನಚರಿ ಪೂರ್ಣ ಗೊಳ್ಳುತ್ತಿತ್ತಂತೆ .,ಹತ್ತಿರದ ದಿಂದ ಕಂಡ ಬಲ್ಲವರ ಅಭಿಪ್ರಾಯ !
ಅಷ್ಟಕ್ಕೂ ದೀಪಕ್ ಹತ್ಯೆಗೆ ಕಾರಣ ವಾದರೂ ಏನು ಎಂಬುದರ ಹಿನ್ನಲೆ ಹುಡುಕುತ್ತಾ ಹೋದರೆ ನಿಜಕ್ಕೂ ಬೇಸರ ಮೂಡುತ್ತದೆ .
ಬ್ಯಾನರ್ ಕಟ್ಟುವ ವಿಚಾರ .! ಹಿಂದೂ ಧಾರ್ಮಿಕ ಕಾರ್ಯಕ್ರಮ ಬ್ಯಾನರ್ ನ್ನು ತೆರವುಗೊಳಿಸಿ ಇಸ್ಲಾಂ ಕಾರ್ಯಕ್ರಮಕ್ಕೆ ಸಂಬಂದ ಪಟ್ಟ ಬ್ಯಾನರ್ ನ್ನು ಕಟ್ಟುವ ವಿಚಾರದಲ್ಲಿ ಕೊಂಚ ಉಭಯ ಭಾಂದವರಲ್ಲಿ ಜಗಳ ನಡೆಯುತ್ತದೆ. ಜಗಳ ತಾರಕಕ್ಕೇರುತ್ತಿರುವಂತೆ ಪೋಲಿಸರ ಆಗಮನವೂ ಆಗುತ್ತದೆ. ಇಂತಹ ಸಮಯದಲ್ಲಿ ತಮ್ಮ ಕ್ಯೂರಾಸಿಟಿಗೋಸ್ಕರ ಆ ಸಮಯದಲ್ಲಿ ಯಾರೇ ಇದ್ದರೂ ಕೂಡಾ ಮೊಬೈಲ್ ತೆಗೆದು ಚಿತ್ರ ಸೆರೆ ಹಿಡಿಯುತ್ತಾರೆ .ಇದು ಸ್ವಾಭಾವಿಕ .,ಎಲ್ಲರಂತೆ ದೀಪಕ್ ಕೂಡಾ ತನ್ನ ಮೊಬೈಲ್ ನಲ್ಲಿ ಆ ದ್ರಶ್ಯಗಳನ್ನು ಚಿತ್ರಿಸಿ ಕೊಳ್ಳುತ್ತಾನೆ.ಇದನ್ನು ಕಂಡ ಆ ಗಲಭೆಯಲ್ಲಿನ ಮುಖ್ಯ ಪಾತ್ರಧಾರಿಯೊಬ್ಬ ದೀಪಕ್ ನ್ನು ಗಮನಿಸಿ ವಿಡಿಯೋ ಡಿಲಿಟ್ ಮಾಡುವಂತೆ ತಾಕಿತು ಮಾಡುತ್ತಾನೆ . ನೋ ಚಾನ್ಸ್ ! ಆ ಮಾತಿಗೆ ಹೆಚ್ಚಿನ ಗಮನ ಕೊಡದೇ ತನ್ನ ದೈನಂದಿನ ಕಾರ್ಯದಲ್ಲಿ ಮಗ್ನನಾಗುತ್ತಾನೆ . ಆದರೆ ಬೆನ್ನು ಬಿಡದ ಪುಂಡರು ,ದೂರವಾಣಿ ಮೂಲಕವೂ ಸಹಾ ಡಿಲೀಟ್ ಮಾಡು ಎಂದು ದುಂಬಾಲು ಬೀಳುತ್ತಾರೆ, ಬೆದರಿಕೆಯನ್ನೂ ಒಡ್ಡುತ್ತಾರೆ . ವಿಡೇಯೂ ಡಿಲೀಟ್ ಮಾಡಿಲ್ಲ ಅಂದರೆ ನಿನ್ನನ್ನೇ ಡಿಲೀಟ್ ಮಾಡುತ್ತೇವೆ ಎಂಬ ಒತ್ತಡವನ್ನೂ ತರುತ್ತಾರೆ. ಫಿಲಿಮಿ ಡೈಲಾಗ್ ಎಂದಷ್ಟೇ ಮನದಲ್ಲಿ ಅರಿತು ,ಅಷ್ಟಕ್ಕೂ ನಾನೇನು ಮಾಡಿದ್ದೇನೆ ? ಯಾಕಾಗಿ ಡಿಲೀಟ್ ಮಾಡಬೇಕು ಎಂದು ಮುಂದಿನ ಅಪಾಯಕಾರಿ ಸನ್ನಿವೇಶ ದ ಬಗ್ಗೆ ಒಂದಿಂಚು ಆಲೋಸಿರಲಿಲ್ಲ ದೀಪಕ್ ಅದರ ಅಗತ್ಯತೆಯೂ ಇರಲಿಲ್ಲ .ಆದರೆ ಜ.2 ದೀಪಕ್ ಗೆ ಕೊನೆಯ ದಿನವಾಗಿತ್ತು .ಪಾಪಿಗಳು ಹೇಳಿದಂತೆ ಸೇಮ್ ಸಿನಿಮಾ ಶೈಲಿಯಲ್ಲೇ ಸ್ಕೆಚ್ ರೂಪಿಸಿ ಬಿಟ್ಟಿದ್ದರು .
ನಂತರ ನಡೆಯಿತು ಹೈಡ್ರಾಮ ! ಸತ್ತ ಹೆಣದ ಮುಂದೆ ರಾಜಕೀಯ ,ಜಾತಿ ಎಲ್ಲವೂ ಬಂದು ಬಿಡುತ್ತವೆ .
ಆತ ಬೆಜೆಪಿ ಕಾರ್ಯಕರ್ತ ಹಿಂದೂ ಮುಖಂಡ .ಮರಳು ಮಾಫಿಯಾದಲ್ಲಿದ್ದ . ಹೀಗೆ ಒಂದೇ ಎರಡೇ ? ಸುಳ್ಳು ಪುಳ್ಳುಗಳೆಲ್ಲವೂ ರೆಕ್ಕೆ -ಪುಕ್ಕ ಕಟ್ಟಿಕೊಂಡು ಜಗಜಾಹೀರಾತು ಆಗುತ್ತದೆ .ಸತ್ತ ದೀಪಕ್ ಗೆ ಮಾತ್ರ ಏನು ನಡೆಯುತ್ತಿದೆ ಎಂಬ ಪ್ರಜ್ಞೆಯೇ ಇರಲಿಲ್ಲ . ವಾಸ್ತವಕ್ಕೆ ಯಾವ ಸಂಘಟನೆಯಾಗಲೇ ,ಮುಖಂಡತ್ವವನ್ನು ವಹಿಸುವುದಾಗಲಿ ಮಣ್ಣಾಗಟ್ಟಿ ಏನೂ ಇರಲಿಲ್ಲ .ಅಮಾಯಕನಾಗಿದ್ದ .ವಿಡಿಯೋ ಚಿತ್ರಿ ಕರಿಸಿದ್ದ ಎಂಬೀ ಒಂದೇ ಒಂದು ಕಾರಣಕ್ಕೆ ಹತ್ಯೆ ಮಾಡಲಾಗಿತ್ತೆ ? ಆತ ಕುತೂಹಲಕ್ಕಾಗಿ ಚಿತ್ರೀಕರಿಸಿದ್ದು ತಪ್ಪೇ ? ಅವನು ಅವಶ್ಯಕತೆಗನುಗುಣವಾಗಿ ವಿಡಿಯೋ ಮಾಡಿದ್ದೇ ಆಗಿದ್ದರೇ ,ಅಂದೇ ಆತ ಅದನ್ನು ವೈರಲ್ ಮಾಡ್ತಾ ಇದ್ದ ,ಎಲ್ಲಾ ಟೀವಿ ಸುದ್ದಿ ಮಾಧ್ಯಮ ಗಳು ಸೇರಿದಂತೆ ಸಾಮಾಜಿಕ ಜಾಲತಾಣ ದಲ್ಲಿ ಅದು ಪ್ರಸಾರ ಕಾಣುತ್ತಿತ್ತು .ಆದರೆ ದೀಪಕ್ ಗೆ ಆ ಇಂಟ್ನೇಷನ್ ಇರಲಿಲ್ಲ .
ಹೆಣದ ಮುಂದೆ ರಾಜಕೀಯ ಮಾಡಿದವರ ವಿರುದ್ದ ದಿಕ್ಕಾರವಿದೆ ತಮ್ಮ ಬೆಳೆ ಬೇಯಿಸಿಕೊಳ್ಳಲು ಇಂಥ ಹೀನ ಕಾರ್ಯಕ್ಕೆ ಕೈ ಹಾಕುತ್ತಿರುವರಿಗೆ ಮಾನ ಮರ್ಯಾದೆ ಒಂದಿನಿತೂ ಇಲ್ಲ. ಇತ್ತ ದೀಪಕ್ ಕುಟುಂಬಕ್ಕೆ ಸಮಾಧಾನ ಪಡಿಸುವ ಅತ್ತ ಅರೆಷ್ಟ್ ಆದವರಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸುವ ಗೌಜಿಗೆ ಹೋಗದೇ ತಮ್ಮ ತಮ್ಮಲ್ಲೇ ಇಲ್ಲ ಸಲ್ಲದ ಆರೋಪ ಹೊರಿಸಿ ಇನ್ನೊಬ್ಬರ ಮೇಲೆ ಕಿಡಿಕಾರುತ್ತಿರುವ ಮತಾಂದ ಸಮಾಜಕ್ಕೆ ನಾಚಿಕೆ ಆಗಬೇಕು ಇದಕ್ಕೆ ಪ್ರತಿಕಾರವೆಂಬಂತೆ ಸಂಘಟನೆಯ ಹಣೆ ಪಟ್ಟಿಯಲ್ಲಿರುವ ಅತಿರಥರು ಇನ್ನೊಬ್ಬ ಅಮಾಯಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಾರೆ ಸಾವು ಬುದುಕಿನ ಮಧ್ಯೆ ಹೋರಾಡಿ ಅಂತೂ ಕೊನೆಗೆ ಬಷೀರ್ ಕೊನೆ ಉಸಿರು ಎಳೆಯುತ್ತಾರೆ .
ತನ್ನ ಅನಿವಾರ್ಯದ ಪರಿಸ್ತಿತಿಗೆ ಸುಖ-ಸಂತೋಷವನ್ನು ಮರೆತು ಯವ್ವನವೆನ್ನೆಲ್ಲಾ ಗಲ್ಪ್ ರಾಷ್ಟ್ರ ದಲ್ಲಿ ಕಳೆದು ಇತ್ತಿಚೆಗಷ್ಟೇ ತಾಯ್ನಾಡಿಗೆ ಬಂದಿದ್ದರು ಕೊನೆ ಘಳಿಗೆಯಲ್ಲಿಯಾದರೂ ಕುಟುಂಬಿಕರ ಜೊತೆ ನೆಮ್ಮದಿಯ ಜೀವನ ಸಾಗಿಸುವ ಬಯಕೆ ಅವರದಾಗಿತ್ತು . ಒಂದು ಪುಟ್ಟ ಪಾಸ್ಟ್ ಪುಡ ಅಂಗಡಿಯನ್ನು ನಡೆಸುತ್ತಿದ್ದರು ಬಷೀರ್ .ಆದರೆ ಏನೋ ಮಾಡೋಣ ಹೇಳಿ ಮತಾಂದರ ಧರ್ಮಯುದ್ಧಕ್ಕೆ ತನ್ನ ಉಸಿರು ಚೆಲ್ಲ ಬೇಕಾಯಿತು .
ನಾಚಿಕೆ ಆಗಬೇಕು ಏನು ಸಾಧನೆ ಆಯ್ತು ? ಅಮಾಯಕನ ಕೊಂದು ನೀವೇನು ಪಡೆದಿರಿ ? ನಿಮಗೆ ತಾಕತ್ತು ಧೈರ್ಯ ಸ್ಥೈರ್ಯ ಇದ್ದಿದ್ದರೆ ದೀಪಕ್ ಹಂತಕರ ಮೇಲೆ ನಿಮ್ಮ ಕೊಪಾಗ್ನಿಯನ್ನು ತೀರಿಸಿಕೊಳ್ಳ ಬೇಕಿತ್ತು ಅದಿಲ್ಲವೆಂದಾದರೆ ಮಂಗಳೂರಿನಲ್ಲಿ ಆಗಾಗ ನಡೆಯುವ ಇಂಥ ಘಟನೆ ಗಳಿಗೆ ಬ್ರೇಕ್ ಹಾಕಬೇಕಿತ್ತು ? ಆ ಹಿಮ್ಮತ್ತು ಖಂಡಿತವಾಗಿಯೂ ಇಲ್ಲ . ಪುಲ್ ಸ್ಟಾಪ್ ಇಲ್ಲದ ಹೇಡಿತನಕ್ಕೆ ಈ ಪರಿಸರದಲ್ಲಿ ಪ್ರತಿ ಬಾರಿಯೂ ಅಷ್ಟೇ ಅಮಾಯಕರುಳೇ ಬಲಿ ಯಾಗುತ್ತಿದ್ದಾರೆ . ಪ್ರಚೋಧಿಸುವವರು ,ರೌಡಿ ಸೀಟರ್ ಗಳು ಯಾರೂ ಸಹಾ ಸತ್ತಿಲ್ಲ !ಬೆಂಕಿ ಹತ್ತಿಸಿ ದೂರ ಸರಿಯುವ ಇವರುಗಳಿಗೆ ಏನು ಗೊತ್ತು ಹೆತ್ತ ಕರುಳು ನೋವು ,ಕುಟುಂಸ್ತರ ಕಣ್ಣೀರು!!
ಇನ್ನು ಬಷೀರ್ ಕೊಲೆಗೆ ಪ್ರತಿಕಾರವಾಗಿ ಯಾವ ಅಮಯಾಕ ಸಿಗುತ್ತಾನೆ ಭೇಟೆಗೆ ಗೊತ್ತಿಲ್ಲ.ಧರ್ಮ ಧರ್ಮಗಳ ಸಂಘರ್ಷ , ಕೋಮು ಸಾಮರಸ್ಯಕ್ಕೆ ಕೊನೆಯೇ ಇಲ್ಲವೇ ? ಬುದ್ದಿವಂತರ ನಾಡು ಬುದ್ದಿ ಹೀನವಾಗುತ್ತಿದೆ !